ADVERTISEMENT

ಐವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 10:10 IST
Last Updated 10 ಜನವರಿ 2012, 10:10 IST

ಧಾರವಾಡ: `ಸಂಗೀತ, ಸಾಹಿತ್ಯಕ್ಕೆ ಹೆಸರುವಾಸಿಯಾದ ಈ ನೆಲದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆಯುತ್ತಿ ರುವು ದರಿಂದ ಜೀವನದಲ್ಲಿ ಧನ್ಯತಾ ಭಾವ ಮೂಡಿದೆ~ ಎಂದು ಚಿತ್ರನಟ ರಾಜೇಶ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ಸೋಮವಾರ ನಡೆದ 62ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತ ನಾಡಿದ ಅವರು, ವರಕವಿ ದ.ರಾ.ಬೇಂದ್ರೆ ಯವರ ಕಾವ್ಯ ಕೃಷಿಗೆ ಸ್ಫೂರ್ತಿದಾಯಕ ವಾಗಿದ್ದ ಈ ನೆಲದಲ್ಲಿ ನನಗೆ ಗೌರವ ಸಿಗುತ್ತಿರುವುದಕ್ಕೆ ಸಂತೋಷವಾಗಿದೆ. ನನ್ನ ಜೀವನ ಪೂರ್ತಿ ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ಆಭಾರಿಯಾಗಿರುತ್ತೇನೆ ಎಂದು ಭಾವುಕರಾಗಿ ನುಡಿದರು.

ಚಿತ್ರನಟ ರಾಜೇಶ, ಪ್ರೊ. ಸಿ.ಆರ್.ರಾವ್, ವಿಮರ್ಶಕ ಡಾ. ಜಿ.ಎಸ್.ಆಮೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ, ಹೈದರಾಬಾದ್‌ನ ಶಿಕ್ಷಣ ತಜ್ಞ ಕಾಂತಿಕ ನೇರಿ ತಾಹೀರ್ ಮಾಹಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡ ಲಾಯಿತು. ಗುಲಬರ್ಗದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಡಾ. ಎ.ಎಂ.ಪಠಾಣ ಅವರ ಅನುಪಸ್ಥಿತಿಯಲ್ಲಿ ಅವರಿಗೂ ಗೌರವ ಡಾಕ್ಟರೇಟ್ ಘೋಷಿಸಲಾಯಿತು.

ಸ್ನಾತಕ, ಸ್ನಾತಕೋತ್ತರ, ಪಿಎಚ್‌ಡಿ, ಎಂಫಿಲ್ ಸೇರಿದಂತೆ ವಿವಿಧ ವಿಷಯ ಗಳಲ್ಲಿ ಒಟ್ಟು 40,976 ವಿದ್ಯಾರ್ಥಿಗಳಿಗೆ ಪದವಿ ನೀಡಲು ಘೋಷಿಸಲಾಯಿತು. 358 ವಿದ್ಯಾರ್ಥಿಗಳು ಖುದ್ದಾಗಿ ಪದವಿ ಸ್ವೀಕರಿಸಿದರು.

ಪಿಎಚ್‌ಡಿಯಲ್ಲಿ 111, ಎಂಫಿಲ್‌ನಲ್ಲಿ 18, ಸ್ನಾತಕೋತ್ತರ ವಿಭಾಗದಲ್ಲಿ 201, ಸ್ನಾತಕ ವಿಭಾಗದಲ್ಲಿ 19, ಕಾನೂನು ವಿಭಾಗದಲ್ಲಿ 7, ಡಿಪ್ಲೋಮಾದಲ್ಲಿ 2 ವಿದ್ಯಾರ್ಥಿಗಳು ಪಡೆ ದರು. 95 ವಿದ್ಯಾರ್ಥಿಗಳು 181 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು.

ರಾಜ್ಯಪಾಲರು ಆಗಮಿಸದ ಕಾರಣ ಕುಲಪತಿ ಪ್ರೊ. ಎಚ್.ಬಿ.ವಾಲೀಕಾರ ಪದವಿ ಹಾಗೂ ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು. ಕುಲಪತಿಗಳು, ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ಪದವಿ ಪಡೆದ ವಿದ್ಯಾರ್ಥಿಗಳು ಹಾಗೂ ಗೌರವ ಡಾಕ್ಟ ರೇಟ್ ಪಡೆದ ಗಣ್ಯರು ಕವಿವಿ ಆಡಳಿತ ಭವನದಿಂದ ಗಾಂಧಿ ಭವನದವರೆಗೆ ಮೆರವಣಿಗೆಯಲ್ಲಿ ಬಂದರು.

ಗೌರವ ಡಾಕ್ಟರೇಟ್ ಪಡೆದ ಗಣ್ಯರು, ಕುಲಸಚಿವ (ಮೌಲ್ಯಮಾಪನ) ಪ್ರೊ. ಜೆ.ಎಸ್.ಭಟ್ ವೇದಿಕೆಯಲ್ಲಿದ್ದರು. ಕುಲ ಸಚಿವ ಪ್ರೊ. ಎಸ್.ಬಿ.ಹಿಂಚಿಗೇರಿ ಸ್ವಾಗ ತಿಸಿ, ಪರಿಚಯಿಸಿ ಹಾಗೂ ಕವಿವಿಯ ಪ್ರಗತಿಯನ್ನು ವಿವರಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.