ADVERTISEMENT

ಕನ್ನಡದ ಪಾಪುಗೆ ಹೃದಯಸ್ಪರ್ಶಿ ಸನ್ಮಾನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 9:15 IST
Last Updated 15 ಜನವರಿ 2012, 9:15 IST

ಧಾರವಾಡ: 92ನೇ ಜನ್ಮದಿನ ಆಚರಿಸಿಕೊಂಡ ಕನ್ನಡದ `ಪಾಪು~  ಡಾ. ಪಾಟೀಲ ಪುಟ್ಟಪ್ಪ ಅವರನ್ನು ಧಾರವಾಡ- ಹುಬ್ಬಳ್ಳಿ ನಾಗರಿಕ ಸಮಿತಿ ವತಿಯಿಂದ ಶನಿವಾರ ಸನ್ಮಾನಿಸಲಾಯಿತು. 

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕಿಕ್ಕಿರಿದು ತುಂಬಿದ್ದ ನೂರಾರು ಅಭಿಮಾನಿಗಳು ಹೂ ಮಾಲೆ, ಶಾಲು ಅರ್ಪಿಸಿ ನೂರಾರು ವರ್ಷ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿ ಸಿದರು.

92 ಹಣತೆ (ಪಣತಿ)ಗಳನ್ನು ಬೆಳಗಿಸಲಾಯಿತು. ಡಾ. ಪಾಟೀಲ ಪುಟ್ಟಪ್ಪ ಹಾಗೂ ಇಂದುಮತಿ ಪುಟ್ಟಪ್ಪ ಅವರನ್ನು ಸಮಿತಿ ವತಿಯಿಂದ ಸಚಿವ ಜಗದೀಶ ಶೆಟ್ಟರ ಸನ್ಮಾನಿಸಿ, ಫಲಕ ನೀಡಿ ಗೌರವಿಸಿದರು.

`ಪರಿವರ್ತನೆಯ ಸಂಧಿಕಾಲದಲ್ಲಿ ನಾಡಿನ ಜನತೆಯನ್ನು ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಪ್ರಗತಿ ಪಥದಲ್ಲಿ ಮುನ್ನ ಡೆಸಿದ ಪಾಪು ಅವರು ಸಂಕ್ರಾಂತಿ ಪುರುಷರು.  ಪಾಪು ಅಂದರೆ ಕರ್ನಾಟಕದ ಆತ್ಮಗೌರವ. ಆಲೂರ ವೆಂಕಟರಾವ್ ಅವರ ವಾರಸುದಾರರಲ್ಲಿ ಪ್ರಮುಖ ರಾದವರು ಪಾಪು~ ಎಂದು ಅಭಿನಂದನ ಭಾಷಣ ಮಾಡಿದ ಡಾ. ಚೆನ್ನವೀರ ಕಣವಿ ಹೇಳಿದರು.

ಆಲೂರ ವೆಂಕಟರಾವ್, ಡಿ.ವಿ.ಗುಂಡಪ್ಪ, ಕುವೆಂಪು, ಹರ್ಡೇಕರ ಮಂಜಪ್ಪ ಅವರಂಥವರೆಲ್ಲರ ಸಾರವನ್ನು ತೆಗೆದು ತಯಾರಿಸಿರುವ ಮೂರ್ತಿ ಡಾ. ಪಾಟೀಲ ಪುಟ್ಟಪ್ಪ. ಸೃಜನಶೀಲ ಲೇಖಕರಾದ ಅವರು ಸಮಗ್ರ ಕರ್ನಾಟಕದ ಹಿತಕ್ಕಾಗಿ ಹೋರಾ ಡಿದ್ದಾರೆ. ದೇಶದಲ್ಲಿದ್ದ ತುರ್ತು ಪರಿಸ್ಥಿತಿ ಅವಧಿಯಲ್ಲಿ ಅವರು ಬರೆದ ಸಂಪಾದಕೀಯ ಈಗಲೂ ಒಂದು ದಾಖಲೆಯಾಗಿಯೇ ಉಳಿದಿದೆ ಎಂದರು.

ಅಭಿನಂದನ ನುಡಿಗಳನ್ನಾಡಿದ ಮಾಜಿ ಸಂಸದ ಪ್ರೊ. ಐ.ಜಿ.ಸನದಿ, ಡಾ. ಪಾಟೀಲ ಪುಟ್ಟಪ್ಪ ಅವರು ಕನ್ನಡ ನಾಡು- ನುಡಿಯ ಧೀಮಂತ ವ್ಯಕ್ತಿ. ಪ್ರಪಂಚದ ಆಳದಷ್ಟು ಅವರ ಜ್ಞಾನದ ಆಳವಿದೆ. ಮುರುಘಾ ಮಠದ ಮೃತ್ಯುಂಜ ಯಪ್ಪಗಳ ಆರ್ಶಿವಾದ ಹೊಂದಿರುವ ಪಾಪು ಅವರು ಯಾವ ಪ್ರಶಸ್ತಿಯ ಬೆನ್ನು ಹತ್ತಿದವರಲ್ಲ, ಪ್ರಶಸ್ತಿಗಳೇ ಅವರ ಬಳಿಗೆ ಬಂದಿವೆ ಎಂದರು.

ಕಾನೂನು ವಿವಿ ಕುಲಪತಿ ಡಾ. ಜೆ.ಎಸ್.ಪಾಟೀಲ ಅಭಿನಂದನ ಭಾಷಣ ಮಾಡಿ, ಪಾಪು ರಾಜ್ಯಸಭಾ ಸದಸ್ಯರಾದ ಅವಧಿಯಲ್ಲಿ ಸಂಸತ್‌ನಲ್ಲಿ ಧಾರವಾಡ ಮೊಹರು ಒತ್ತಿದ್ದಾರೆ. ಅದು ಇಂದಿಗೂ ದಾಖಲೆ ಯಾಗಿ ಉಳಿದಿದೆ. ಖಾದಿ ಕ್ಷೇತ್ರದ ಅಭಿವೃದ್ಧಿ ಹಾಗೂ ಯುವಕರಲ್ಲಿ ರಾಷ್ಟ್ರಪ್ರೇಮ ಬೆಳೆಸುವ ನಿಟ್ಟಿನಲ್ಲಿ ಪಾಪು ಅವರು ತಮಗೆ ಸೂಚನೆ ನೀಡಿದ್ದರು.
 
ಈ ಹಿನ್ನೆಲೆಯಲ್ಲಿ ಪ್ರತಿ ಸೋಮವಾರ ಕಾನೂನು ವಿವಿ ಹಾಗೂ ಅದರ ವ್ಯಾಪ್ತಿಯಲ್ಲ ಎಲ್ಲ ಕಾಲೇಜುಗಳಲ್ಲಿ ಖಾದಿ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಕಾಲೇಜು ಆರಂಭಕ್ಕೆ ಮುನ್ನ ರಾಷ್ಟ್ರಗೀತೆ ಹಾಡುವುದು ಕಡ್ಡಾಯಗೊಳಿಸಲಾಗಿದೆ ಎಂದರು. ಯುವಕರಲ್ಲಿ ಯುವಕರಾಗಿ, ಮಕ್ಕಳಲ್ಲಿ ಮಕ್ಕ ಳಾಗಿ ಹೊಸ ಚೈತನ್ಯ ತುಂಬುವ ಶಕ್ತಿ ಪಾಟೀಲ ಪುಟ್ಟಪ್ಪ ಅವರಲ್ಲಿದೆ ಎಂದು ಕೊಂಡಾಡಿದರು.

ಚಿತ್ರನಟ ಅಶೋಕ, ಶಾಸಕ ಚಂದ್ರಕಾಂತ ಬೆಲ್ಲದ, ಸೀಮಾ ಮಸೂತಿ, ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ. ಹೇಮಾ ಪಟ್ಟಣಶೆಟ್ಟಿ, ಡಾ. ಎಸ್.ಎಂ.ವೃಷಭೇಂದ್ರಸ್ವಾಮಿ, ನಿಂಗಣ್ಣ ಕುಂಟಿ, ಡಾ. ಡಿ.ಎಂ.ಹಿರೇಮಠ ಣತೆ ಬೆಳಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.