ADVERTISEMENT

ಕರ್ನಾಟಕದ ವಿವೇಕಾನಂದ ‘ಕುಮಾರ ಶ್ರೀ’

150ನೇ ಜಯಂತಿಯಲ್ಲಿ ಅಭಿನವ ಸಿದ್ಧಾರೂಢ ಶ್ರೀ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 7:39 IST
Last Updated 12 ಮಾರ್ಚ್ 2018, 7:39 IST
ಹಾನಗಲ್ ಕುಮಾರ ಸ್ವಾಮೀಜಿ ಅವರ 150ನೇ ಜಯಂತ್ಯುತ್ಸವದ ಅಂಗವಾಗಿ ಹುಬ್ಬಳ್ಳಿಯ ಮೂರು ಸಾವಿರ ಮಠದ ಆವರಣದಲ್ಲಿ ಭಾನುವಾರ ಸ್ವಾಮೀಜಿಯ ಭಾವಚಿತ್ರದ ಮೆರವಣಿಗೆ ನಡೆಯಿತು
ಹಾನಗಲ್ ಕುಮಾರ ಸ್ವಾಮೀಜಿ ಅವರ 150ನೇ ಜಯಂತ್ಯುತ್ಸವದ ಅಂಗವಾಗಿ ಹುಬ್ಬಳ್ಳಿಯ ಮೂರು ಸಾವಿರ ಮಠದ ಆವರಣದಲ್ಲಿ ಭಾನುವಾರ ಸ್ವಾಮೀಜಿಯ ಭಾವಚಿತ್ರದ ಮೆರವಣಿಗೆ ನಡೆಯಿತು   

ಹುಬ್ಬಳ್ಳಿ: ‘ಸಮಾಜ ಮತ್ತು ಧರ್ಮದ ಒಳಿತಿಗಾಗಿ ಶ್ರಮಿಸಿದ ಹಾನಗಲ್ ಕುಮಾರ ಸ್ವಾಮೀಜಿ ಅವರು, ಕರ್ನಾಟಕದ ವಿವೇಕಾನಂದ’ ಎಂದು ವಿಜಯಪುರದ ಅಭಿನವ ಸಿದ್ಧಾರೂಢ ಸ್ವಾಮೀಜಿ ಬಣ್ಣಿಸಿದರು.

ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ಭಾನುವಾರ ನಡೆದ ಕುಮಾರ ಸ್ವಾಮೀಜಿಯ 150ನೇ ಜಯಂತ್ಯುತ್ಸವದಲ್ಲಿ ನುಡಿನಮನ ಸಲ್ಲಿಸಿದ ಅವರು, ‘ಸ್ವಾಮೀಜಿ ಕುರಿತು ಇತ್ತೀಚೆಗೆ ನಡೆಯುತ್ತಿರುವ ಚರ್ಚೆ ಅವರ ಪ್ರಸ್ತುತತೆಯನ್ನು ತೋರಿಸುತ್ತದೆ’ ಎಂದರು.

‘ಪ್ರಚಾರದಿಂದ ದೂರ ಉಳಿದ ಸ್ವಾಮೀಜಿಯ ವಿಚಾರ ಹಾಗೂ ದೂರ
ದರ್ಶಿತ್ವವನ್ನು ಅರಿತು ನಾವು ಮುಂದೆ ಸಾಗಬೇಕಿದೆ’ ಎಂದು ಹೇಳಿದರು.

ADVERTISEMENT

ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಪಂಚಪೀಠ, ವಿರಕ್ತ ಹಾಗೂ ಅದ್ವೈತ ಪರಂಪರೆಗೂ ಸ್ವಾಮೀಜಿಗಳನ್ನು ಕೊಟ್ಟ ಕೀರ್ತಿ ಅವರದು. ಇತ್ತೀಚೆಗೆ ಮಾತೇ ಸಾಧನೆಯಾಗುತ್ತಿದೆ. ಆದರೆ, ಸಾಧನೆ ಮೂಲಕ ಮಾತಾಗಿದ್ದವರು ಸ್ವಾಮೀಜಿ’ ಎಂದು ಹೇಳಿದರು.

ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿ, ‘ವೀರಶೈವ ಮತ್ತು
ಲಿಂಗಾಯತ ಎರಡೂ ಒಂದೇ ಎಂಬುದನ್ನು ಎಲ್ಲರೂ ಅರಿತುಕೊಳ್ಳ
ಬೇಕು’ ಎಂದು ಕರೆ ನೀಡಿದರು.

ಬಾತಾಂಬ್ರ ವಿರಕ್ತ ಮಠದ ಶಿವಯೋಗಿಶ್ವರ ಸ್ವಾಮೀಜಿ ಮಾತನಾಡಿ, ‘ಬಸವಣ್ಣನ ಅವತಾರ ಪುರುಷನಾದ ಕುಮಾರ ಸ್ವಾಮೀಜಿ ಅವರ ಬಗ್ಗೆ ಟೀಕೆ ಸಲ್ಲದು. ಟೀಕೆಗೆ ನಿಲುಕದ ವ್ಯಕ್ತಿತ್ವ ಅವರದು’ ಎಂದರು.

ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಮಾತನಾಡಿ, ‘ಮಠ ಮತ್ತು ಸ್ವಾಮೀಜಿ ಹೇಗಿರಬೇಕು ಎಂಬುದಕ್ಕೆ ಮಾದರಿ ಹಾಕಿಕೊಟ್ಟ ಕುಮಾರ ಸ್ವಾಮೀಜಿ ಅವರ ವಿಚಾರಗಳು ಸಾರ್ವಕಾಲಿಕ’ ಎಂದರು.

ಪ್ರೊ.ಜಿ.ಎಚ್‌. ಹನ್ನೆರಡು ಮಠ ಅವರು, ಕುಮಾರ ಸ್ವಾಮೀಜಿ ಕುರಿತು ಬರೆದಿರುವ ‘ಯುಗ ಪುರುಷ’ ನಾಟಕ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಪಂಚಲೋಹದಿಂದ ತಯಾರಿಸಿದ ಕುಮಾರ ಸ್ವಾಮೀಜಿ ಪ್ರತಿಮೆಯನ್ನು ಶಿರೂರಿನ ಸಿದ್ಧಲಿಂಗ ಸ್ವಾಮೀಜಿ ಅವರು ಮೂರು ಸಾವಿರ ಮಠಕ್ಕೆ ಕೊಡುಗೆಯಾಗಿ ನೀಡಿದರು.

ಅಕ್ಕಲಕೋಟೆಯ ಚನ್ನಬಸವ ಸ್ವಾಮೀಜಿ ಮತ್ತು ದಾನೇಶ್ವರ ದೇವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.