ಧಾರವಾಡ: ‘ಕರ್ನಾಟಕದಲ್ಲಿ ಎಲ್ಲಾ ಸೌಕರ್ಯ ಇದೆ. ಆದರೆ, ಪ್ರಾಮಾಣಿಕ ಸರ್ಕಾರ ಇಲ್ಲದಿರುವುದು ಇಲ್ಲಿನ ದೊಡ್ಡ ಕೊರತೆ. ಈ ರಾಜ್ಯ ಕಾಂಗ್ರೆಸ್ಗೆ ಭ್ರಷ್ಟಾಚಾರದ ಎಟಿಎಂ ಇದ್ದಂತೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟೀಕಿಸಿದರು.
ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸದನ ಸುಗಮ ಕಲಾಪಕ್ಕೆ ಕಾಂಗ್ರೆಸ್ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಧಾರವಾಡದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ರಾಷ್ಟ್ರವ್ಯಾಪಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ದೆ ಮಾಡುತ್ತಿದ್ದಾರೆ. ₹40 ಲಕ್ಷ ಮೌಲ್ಯದ ವಾಚ್ ಕಟ್ಟಿರುವ ಅವರು, ತಮ್ಮ ದೇಹದ ತುಂಬಾ ಭ್ರಷ್ಟಾಚಾರವನ್ನೇ ಹೊದ್ದಿದ್ದಾರೆ’ ಎಂದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ಸಿದ್ದರಾಮಯ್ಯ ತಲೆ ತಿರುಕನಂತೆ ಮಾತನಾಡುತ್ತಿದ್ದಾನೆ. ಸ್ವಂತ ಜಿಲ್ಲೆಯ ಕ್ಷೇತ್ರ ಬಿಟ್ಟು ಬೇರೆ ಕಡೆಗೆ ಕ್ಷೇತ್ರ ಹುಡುಕುತ್ತಿರುವುದರಿಂದ ಅವನ ಯೋಗ್ಯತೆ ಗೊತ್ತಾಗುತ್ತದೆ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ‘ಹದಿನೈದು ವರ್ಷಗಳ ಹಿಂದೆ ದುರ್ಗದ ಬೈಲಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಾ ಗಾಂಧಿ ಗಂಡು ಮಗು ಹುಟ್ಟಿದೆ ಎಂದು ಸಿಹಿ ಹಂಚುತ್ತಿದ್ದರು. ನಾಯಕ ಸಿಕ್ಕಿದ್ದಾನೆಂದು ಸಂಭ್ರಮಿಸುತ್ತಿದ್ದು. ಇದು ಕಾಂಗ್ರೆಸ್ನ ಸ್ಥಿತಿ’ ಎಂದು ವ್ಯಂಗ್ಯವಾಡಿದರು.ಎಂದು ಸಂಸದ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.
‘ಬಿಜೆಪಿಯಲ್ಲಿ ನಾಯಕನಾಗಬೇಕಾದರೆ ಎಲ್ಲ ಹಂತಗಳನ್ನು ದಾಟಬೇಕು. ಆದರೆ, ಕಾಂಗ್ರೆಸ್ನಲ್ಲಿ ಇಂದಿರಾ ಗಾಂಧಿ ಕುಟುಂಬದಲ್ಲಿ ಜನಿಸಿದರೆ ಸಾಕು, ಅರ್ಹತೆ ಇರಲಿ, ಇಲ್ಲದಿರಲಿ ನಾಯಕನಾಗಿ ಬಿಡುತ್ತಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.