ADVERTISEMENT

ಕಿಮ ್ಸ್ ಸ್ವಚ್ಛತೆಗೆ ಲಾಡ್ ನೇತೃತ್ವ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 7:10 IST
Last Updated 16 ಸೆಪ್ಟೆಂಬರ್ 2013, 7:10 IST

ಹುಬ್ಬಳ್ಳಿ: ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ವೈದ್ಯಕೀಯ ಸಂಸ್ಥೆಯಲ್ಲಿ (ಕಿಮ್ಸ್) ಎನ್‌ಎಸ್‌ಎಸ್ ವಿದ್ಯಾರ್ಥಿ­ಗಳಿಂದ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿರುವುದಾಗಿ ಸಚಿವ ಸಂತೋಷ್ ಲಾಡ್‌ ತಿಳಿಸಿದರು.

ಕಿಮ್ಸ್ ಆವರಣದಲ್ಲಿ ಭಾನುವಾರ ಎನ್‌ಎಸ್‌ಎಸ್‌ ವಿದ್ಯಾಥಿರ್ಗಳಿಂದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಕ್ಟೋಬರ್‌ 2ರಂದು ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲೂ ಇದೇ ರೀತಿಯ ಕಾರ್ಯಕ್ರಮ ಆಯೋ­ಜಿ­ಸಲಾಗಿದೆ. ಮನೆ, ಬಡಾವಣೆ, ನಗರ, ಗ್ರಾಮವನ್ನು ಸ್ವಚ್ಛವಾಗಿಟ್ಟು­ಕೊಳ್ಳುವ ಜೊತೆಗೆ ಜನಸಾಮಾನ್ಯರ ಸೇವೆಗಾ ಗಿಯೇ ಇರುವ ಸರ್ಕಾರದ ವೈದ್ಯಕೀಯ ಸಂಸ್ಥೆಯೊಂದರಲ್ಲಿ ಸ್ವಚ್ಛತೆ ಕಾಪಾಡಿ­ಕೊಳ್ಳಬೇಕಾದ ಅನಿವಾ­ರ್ಯತೆ ಕುರಿತು ವಿದ್ಯಾರ್ಥಿಗಳಿಗೆ ಶಿಬಿರದ ಮೂಲಕ ಮನದಟ್ಟು ಮಾಡಲಾಗುವುದು ಎಂದರು.

ಕಿಮ್ಸ್ ನಿರ್ದೇಶಕಿ ಡಾ.ವಸಂತಾ ಕಾಮತ್‌, ಕಿಮ್ಸ್ ಆವರಣದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವುದು ಎಲ್ಲರ ಆದ್ಯ ಕರ್ತವ್ಯ ಎಂದು ಅಭಿಪ್ರಾಯಪಟ್ಟರು. ಅವಳಿ ನಗರದ ವಿವಿಧ ಕಾಲೇಜು­ಗಳ 500ಕ್ಕೂ ಹೆಚ್ಚು ಎನ್‌ಎಸ್ಎಸ್ ವಿದ್ಯಾರ್ಥಿಗಳು, ಅಧಿಕಾರಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂ­ಡರು.

ಅವರೊಟ್ಟಿಗೆ ಕಿಮ್ಸ್‌ನ ಸ್ವಚ್ಛತಾ ಸಿಬ್ಬಂದಿ, ಮಹಾನಗರ ಪಾಲಿಕೆ ಸಿಬ್ಬಂದಿ, ಕಿಮ್ಸ್ ವೈದ್ಯರು, ಸಿಬ್ಬಂದಿ ಕೈ ಜೋಡಿಸಿ ಆಸ್ಪತ್ರೆಯ ಆವರಣ, ವಾರ್ಡ್ ಗಳನ್ನು ಸ್ವಚ್ಛಗೊಳಿಸಿದರು. ಆಸ್ಪತ್ರೆಯನ್ನು ಸ್ವಚ್ಛವಾಗಿಟ್ಟು ಕೊಳ್ಳ­ಬೇಕಾದ ಅಗತ್ಯತೆಯ ಬಗ್ಗೆ ರೋಗಿ­ಗಳು ಹಾಗೂ ಅವರ ಸಂಬಂಧಿಕರಿಗೆ ಅರಿವು ಮೂಡಿಸಿದರು. ಸಚಿವರೇ ಖುದ್ದಾಗಿ ವಿದ್ಯಾರ್ಥಿಗಳೊಂದಿಗೆ ಕೈ ಜೋಡಿಸಿ ಸ್ವಚ್ಛತಾ ಕಾರ್ಯದಲ್ಲಿ ತೊಡ­ಗಿದ್ದರಿಂದ ಅದರಿಂದ ಸ್ಫೂರ್ತಿ ಪಡೆದ­ವರಂತೆ ಸಾರ್ವಜನಿಕರು ಪಾಲ್ಗೊಂ-­ಡಿದ್ದು ವಿಶೇಷವಾಗಿತ್ತು.

ಲಾಡ್‌ ಅವರೊಂದಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಡಾ.ಮಹೇಶ ನಾಲವಾಡ, ಸದಾನಂದ ಡಂಗನವರ, ಮೋಹನ ಹಿರೇಮನಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು. ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದವರಿಗೆ ಸಚಿವ ಸಂತೋಷ ಲಾಡ್ ಸ್ವಂತ ಖರ್ಚಿನಲ್ಲಿ ಮುಂಜಾನೆ ಉಪಾಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದರು.

ADVERTISEMENT

ಕ್ಷಮೆ ಯಾಚನೆ
ಸ್ವಚ್ಛತಾ ಕಾರ್ಯಕ್ರಮದ ಉದ್ಘಾಟನೆ ಮುಂಜಾನೆ 9.30ಕ್ಕೆ ನಿಗದಿಯಾಗಿದ್ದರೂ ಸಚಿವ ಸಂತೋಷ್ ಲಾಡ್ ಕಿಮ್ಸ್ ಆವರಣಕ್ಕೆ ಬಂದಾಗ 11 ಗಂಟೆ­ಯಾಗಿತ್ತು. ಸಚಿವರ ಆಗಮನಕ್ಕೆ ಕಾಯ್ದು ಉಪಹಾರ ಸೇವಿಸದೆ ಬಿಸಿಲಲ್ಲಿ ನಿಂತು ಬಸವಳಿದಿದ್ದ ಎನ್ಎಸ್ಎಸ್‌ ವಿದ್ಯಾರ್ಥಿಗಳು ಕೊನೆಗೆ ಅಲ್ಲಲ್ಲಿಯೇ ಕುಳಿತು ವಿಶ್ರಾಂತಿ ಪಡೆದರು.

ಕಲಘಟಗಿ ಬಿಡುವಾಗ ಕ್ಷೇತ್ರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಅಹವಾಲು ಹಿಡಿದು ಬಂದಿದ್ದರಿಂದ ಸಮಾರಂಭಕ್ಕೆ ತಡವಾಗಿ ಆಗಮಿಸಬೇಕಾಯಿತು ಎಂದು ಸಮಜಾಯಿಷಿ ನೀಡಿದ ಸಚಿವರು, ವೃಥಾ ಕಾಯಿ­ಸಿದ್ದಕ್ಕಾಗಿ ವಿದ್ಯಾರ್ಥಿಗಳಲ್ಲಿ ಕ್ಷಮೆ ಯಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.