ADVERTISEMENT

ಕೇಸರಿ ಬಣ್ಣ ತ್ಯಾಗದ ಸಂಕೇತ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 6:40 IST
Last Updated 18 ಫೆಬ್ರುವರಿ 2012, 6:40 IST

ಧಾರವಾಡ: `ಸ್ವಾಮಿ ವಿವೇಕಾ ನಂದರ ಬಗ್ಗೆ ಮಾತನಾಡಿದರೆ ಅದು ಕೇಸರೀಕರಣ ಎಂದು ಹೇಳುತ್ತಾರೆ. ಕೇಸರಿ ಬಣ್ಣವು ನಮ್ಮ ರಾಷ್ಟ್ರಧ್ವಜ ದಲ್ಲಿಯೇ ಇದೆ. ಕೇಸರಿ ಬಣ್ಣವು ತ್ಯಾಗದ ಸಂಕೇತ. ಆದ್ದರಿಂದ ಇದನ್ನು ತಪ್ಪಾಗಿ ಅರ್ಥೈಸಬಾರದು~ ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ದೇವಾನಂದ ಗಾಂವಕರ್ ಹೇಳಿದರು.

ಇಲ್ಲಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ಸಮ್ಮೇಳನದಲ್ಲಿ ಮಾತನಾಡಿದ ಅವರು, ವಿವೇಕಾನಂದರ ಆದರ್ಶಗಳು ಪ್ರತಿಯೊಬ್ಬರಿಗೂ ಪ್ರೇರಣೆಯಾಗ ಬೇಕು. ಈ ನಿಟ್ಟಿನಲ್ಲಿ ಅವುಗಳನ್ನು ಪಠ್ಯ ಕ್ರಮದಲ್ಲಿ ಅಳವಡಿಸಬೇಕು ಎಂದರು.

ದೇಶದಲ್ಲಿ ಅನೈತಿಕತೆ, ಅರಾಜಕತೆ ಹೆಚ್ಚುತ್ತಿರುವುದು ಕಲಿತವರಿಂದಲೇ. ಕೇವಲ ಅಕ್ಷರದಿಂದ ಮನುಷ್ಯನಲ್ಲಿ ಸಂಸ್ಕಾರ ಬರಲು ಸಾಧ್ಯವಿಲ್ಲ. ಅಕ್ಷರದ ಜೊತೆಗೆ ಜ್ಞಾನ ಸಂಪಾದನೆಯನ್ನು ಮಾಡಿಕೊಳ್ಳಬೇಕು. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ಹೊಣೆಗಾರಿಕೆ ಹೊತ್ತಿರುವ ಶಿಕ್ಷಕರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕಿದೆ.
 

ಜ್ಞಾನಕ್ಕೆ ಸಾವಿಲ್ಲ, ಅದು ಪ್ರವಹಿಸುವ ನದಿಯಿದ್ದಂತೆ. ಶಿಕ್ಷಕ ಭೌತಿಕವಾಗಿ ಇಲ್ಲದಿದ್ದರೂ ಅವನು ನೀಡಿದ ಜ್ಞಾನ ಮುಂದಿನ ಪೀಳಿಗೆ ಮೇಳೆ ಪ್ರಭಾವ ಬೀರಿರುತ್ತದೆ. ಹೀಗಾಗಿ ಶಿಕ್ಷಕ ವೃತ್ತಿಯನ್ನು ಪವಿತ್ರವಾದಂಥ ವೃತ್ತಿ ಎಂದು ಹೇಳಿದರು.

ಶಿಕ್ಷಕರೇ ದೇಶದ ಆಧಾರಸ್ಥಂಬಗಳು, ಆದ್ದರಿಂದ ಇಂಥ ಸಮ್ಮೇಳನಗಳಲ್ಲಿ ದೇಶಕ್ಕೆ ಇರುವ ಸಮಸ್ಯೆಗಳು, ಗಂಡಾಂತರಗಳು ಯಾವುವು ಹಾಗೂ ಅವುಗಳನ್ನು ಎದುರಿಸುವ ಬಗ್ಗೆ ಗಂಭೀರ ಚಿಂತನೆ ನಡೆಯಬೇಕು ಎಂದ ಅವರು, ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ಸಂಬಳ ಪಡೆಯುವುದು ಕೇವಲ ಹೊಟ್ಟೆ ತುಂಬಿಕೊಳ್ಳಲು ಮಾತ್ರ ಆಗಬಾರದು. ಉತ್ತಮ ಮಾನವ ಸಂಪನ್ಮೂಲ ಬೆಳೆಸುವ ಮೂಲಕ ಸಮಾಜ ಕಟ್ಟುವ ಕೆಲಸ ಶಿಕ್ಷಕರಿಂದ ಆಗಬೇಕು ಎಂದು ಆಶಿಸಿದರು.

`ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ದೊಡ್ಡ ಜವಾಬ್ದಾರಿ ಹೊತ್ತಿರುವ ಶಿಕ್ಷಕರು ಸಮಾಜಕ್ಕೆ ಆದರ್ಶಪ್ರಾಯರಾಗಿರಬೇಕು. ಮಕ್ಕಳನ್ನು ಪ್ರೀತಿ, ವಿಶ್ವಾಸದಿಂದ ಕಂಡು ಅವರನ್ನು ಹೃದಯದಲ್ಲಿ ಟ್ಟುಕೊಳ್ಳಬೇಕು. ಮಕ್ಕಳಲ್ಲಿ ಗೌರವ ಭಾವನೆ ಬೆಳೆಯುವಂತೆ ಶಿಕ್ಷಕರು ಕೆಲಸ ಮಾಡಬೇಕು~ ಎಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಶೈಕ್ಷಣಿಕ ಸಲಹೆಗಾರ ಎ.ಎಸ್. ರಾಮಚಂದ್ರರಾವ್ ಹೇಳಿದರು.

ರಾಮಕೃಷ್ಣ ಪರಮಹಂಸರು ಹಾಗೂ ವಿವೇಕಾನಂದರ ಆದರ್ಶಗಳು ಶಿಕ್ಷಕರಿಗೆ ಮಾರ್ಗದರ್ಶಿಯಾಗಬೇಕು. ಮಕ್ಕಳ ಮುಗ್ಧತೆ, ಅವರು ಕೊಡುವ ಸಂತೋಷ, ಅವರಲ್ಲಿರುವ ಕುತೂಹಲ ್ನ ಪಡೆದು ಶಿಕ್ಷಕರು ಸಂತೋಷ ಪಡಬೇಕು. ಮಗುವಿನ ಮುಗ್ಧತೆ ಉಳಿಸಿ ಕೊಂಡಿದ್ದರಿಂದ ಪರಮಹಂಸರು, ವಿವೇಕಾ ನಂದರು ಮಹಾನ್ ಗುರು ಗಳಾದರು. ಇಂಥವರ ಆದರ್ಶಗಳನ್ನು ಅಳವಡಿಸಿಕೊಂಡು ಶಿಕ್ಷಕತ್ವದಿಂದ ಗುರುತ್ವದ ಸ್ಥಾನಕ್ಕೇರಬೇಕು ಎಂದರು.

ಇಂದಿನ ಯುವಜನತೆ ದಾರಿ ತಪ್ಪುತ್ತಿದೆ ಎನ್ನುವುದಕ್ಕೆ ಶಿಕ್ಷಕರು ಕಾರಣ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಉತ್ತಮ ದಾರಿ ತೋರಬೇಕು. ಪಾಲಕರು, ಶೀಕ್ಷಕರು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುವುದು ಅಗತ್ಯವಿದೆ ಎಂದು ಹೇಳಿದರು.

ರೇವಣ್ಣ ಸಿದ್ದಪ್ಪ ತುಮಕೂರು ಅವರು ಬರೆದ ಲರ್ನ್ ಆ್ಯಂಡ್ ಟೀಚ್ ಇಂಗ್ಲಿಷ್ ಎಂಬ ಪುಸ್ತಕದ ಬಿಡುಗಡೆ ನಡೆಯಿತು. 206ರಲ್ಲಿಯೇ ಈ ಪುಸ್ತಕ ಬಿಡುಗಡೆಯಾಗಿದ್ದು, ಇಂದು 14ನೇ ಮುದ್ರಣವನ್ನು ಲೋಕಾರ್ಪಣೆ ಮಾಡಲಾಯಿತು.

ಗದಗ- ವಿಜಾಪುರ ರಾಮಕೃಷ್ಣ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು. ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ವೇದಿಕೆಯಲ್ಲಿದ್ದರು. ವಿಜಯಾನಂದ ಸರಸ್ವತಿ ಸ್ವಾಮೀಜಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT