ADVERTISEMENT

ಗಣೇಶನಿಗೆ ಸಂಭ್ರಮದ ವಿದಾಯ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 9:30 IST
Last Updated 10 ಸೆಪ್ಟೆಂಬರ್ 2011, 9:30 IST

ಹುಬ್ಬಳ್ಳಿ:  ಅಲ್ಲಿ `ಗಣೇಶ ಮಹಾರಾಜಕೀ ಜೈ~ ಎಂಬ ಘೋಷಣೆ ಮುಗಿಲು ಮುಟ್ಟುವಂತಿತ್ತು. ಜೊತೆಗೆ ಎದೆ ನಡುಗಿಸುವ ಧ್ವನಿವರ್ಧಕದಲ್ಲಿ ಕೇಳುತ್ತಿದ್ದ ಹಾಡಿಗೆ ಕುಣಿವ ಯುವಕರು.

ಇದು ಶುಕ್ರವಾರ ಹಳೇಹುಬ್ಬಳ್ಳಿಯಲ್ಲಿ ಕಂಡ ದೃಶ್ಯ. ಕಳೆದ 9 ದಿನಗಳಿಂದ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಶುಕ್ರವಾರ ವಿಸರ್ಜಿಸುವ ಸಂಭ್ರಮಕ್ಕೆ ನೆರೆದವರು ರಂಗು ತಂದರು. ಆಯಾ ಮಂಡಳದವರು ಅಲಂಕಾರ ಮಾಡಿದ ವಾಹನಗಳಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದರು. ನಂತರ ಮಹಿಳೆಯರು ಆರತಿ ಬೆಳಗಿ ನೈವೇದ್ಯ ಅರ್ಪಿಸಿದರು. ಆಮೇಲೆ ಆರಂಭಗೊಂಡ ಮೆರವಣಿಗೆಯಲ್ಲಿ ಪಟಾಕಿಗಳನ್ನು ಹೊಡೆದಾಗ ಅವು ಬಾನಂಗಳದಲ್ಲಿ ಚಿತ್ತಾರ ಬಿಡಿಸಿದವು. ಬೆಳ್ತಂಗಡಿಯ ಸೃಷ್ಟಿ ಆರ್ಟ್ಸ್‌ನವರ ಗೊಂಬೆ ಕುಣಿತ, ಕೀಲು ಕುಣಿತ, ಕುಂಭಮೇಳ, ಛತ್ರ, ಚಾಮರ, ಕುದುರೆ, ಬ್ಯಾಂಡ್ ಹಾಗೂ ಝಾಂಜ್ ಮೇಳಗಳು ಮೆರವಣಿಗೆಯಲ್ಲಿದ್ದವು. ಜೊತೆಗೆ ಎತ್ತಿನ ಸಾಲು, ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ತಾಂಡವ ಮಹಿಳಾ ಕಲಾ ಸಂಘದ ಡೊಳ್ಳು ಕುಣಿತ ಮೆರವಣಿಗೆಯ ಸೊಬಗನ್ನು ಹೆಚ್ಚಿಸಿತು.

ಚನ್ನಪೇಟೆ, ಅರವಿಂದನಗರ, ಕಾರವಾರ ರಸ್ತೆಯ ಮೂಲಕ ಶ್ರೀನಗರದ ಕಪಿಲಾ ಬಾವಿ ತಲುಪಿದ ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ವಿಸರ್ಜಿಸಲಾಯಿತು. ಇದಕ್ಕೂ ಮೊದಲು ಹಳೇಹುಬ್ಬಳ್ಳಿಯ ದುರ್ಗದಬೈಲಿನಲ್ಲಿ ನಡೆದ ಸಮಾರಂಭದಲ್ಲಿ ಪೊಲೀಸ್ ಕಮೀಷನರ್ ಡಾ.ಕೆ. ರಾಮಚಂದ್ರ ರಾವ್ ಚಾಲನೆ ನೀಡಿ, `ಸರ್ವ ಧರ್ಮದವರಲ್ಲಿ ಏಕತೆಯನ್ನು ಈ ಉತ್ಸವ ತಂದಿದೆ. ಇದರಿಂದ ಸೌಹಾರ್ದ ಮನೋಭಾವ ಹೆಚ್ಚಿದೆ. ಜೊತೆಗೆ ಶಾಂತ ರೀತಿಯ ಉತ್ಸವಕ್ಕೆ ಮಾದರಿಯಾಗಿದೆ. ಈ ಪರಂಪರೆ ಮುಂದುವರಿಯಲಿ~ ಎಂದು ಹಾರೈಸಿದರು.

ಪಾಲಿಕೆ ಸದಸ್ಯ ಡಾ.ಪಾಂಡುರಂಗ ಪಾಟೀಲ ಉದ್ಘಾಟಿಸಿ, `ಜಾತಿ, ಮತ ಎಂಬ ಭೇದ ಅಳಿದು ಅನ್ಯೋನ್ಯತೆ ಭಾವ ಎಲ್ಲರ ಮನದಲ್ಲಿ ಮೂಡಿದೆ~ ಎಂದರು. ಅತಿಥಿಗಳಾಗಿ ಉಪಮೇಯರ್ ನಾರಾಯಣ ಜರತಾರಘರ, ಪಾಲಿಕೆ ಸದಸ್ಯರಾದ ರಾಧಾಬಾಯಿ ಸಫಾರೆ, ಲಕ್ಷ್ಮಣ ಕಲಾಲ್, ರಂಗಾ ಬದ್ದಿ, ಗೋಪಾಲ ರಾವ್ ಜುಜಾರ ಮಾತನಾಡಿದರು. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಅಧ್ಯಕ್ಷ ಶ್ರೀಶೈಲಪ್ಪ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಎಸಿಪಿ ಎನ್. ಎಸ್. ಪಾಟೀಲ, ಎ.ಬಿ. ಬಡಿಗೇರ ಅಲ್ಲದೇ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರಭು ಹಿಪ್ಪರಗಿ, ಶಂಕರರಾವ್ ಸಫಾರೆ, ಡಾ.ಎ.ಎಸ್. ಪ್ರಶಾಂತ, ಸಿ.ಎಸ್. ಮೆಹಬೂಬ್ ಬಾಷಾ, ಸಾಯಿನಾಥ ಹಿತ್ತಾಳೆ ಹಾಗೂ ಜಲಾಲುದ್ದಿನ್ ವಿಜಾಪುರ ಅವರನ್ನು ಸನ್ಮಾನಿಸಲಾಯಿತು.
ಮಹಾಮಂಡಳ ಉಪಾಧ್ಯಕ್ಷ ಶ್ಯಾಮಸುಂದರ ಹಬೀಬ ಸ್ವಾಗತಿಸಿದರು. ಪಿ.ಎಂ. ಹೂಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲ್ತಾಫ ಕಿತ್ತೂರ ವಂದಿಸಿದರು. ಅಮರೇಶ ಹಿಪ್ಪರಗಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.