ಧಾರವಾಡ: ಯುವ ಕಲಾವಿದರು ತಂತ್ರಜ್ಞಾನದ ಸಾಧ್ಯತೆಗಳನ್ನು ಬಳಸಿಕೊಂಡು ಜಗತ್ತಿನಾದ್ಯಂತ ಕಲೆ ತಲುಪಿಸಬೇಕು. ಆ ಮೂಲಕ ಆರ್ಥಿಕವಾಗಿ ಸುಸ್ಥಿರವಾಗಬೇಕು ಎಂದು ಪತ್ರಕರ್ತ ರಾಜು ವಿಜಾಪೂರ ಹೇಳಿದರು.
ಇಲ್ಲಿನ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಆರಂಭಗೊಂಡ ಮೂರು ದಿನಗಳ ಮುಂಗಾರು ಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಿಜಿಟಲ್ ಜಗತ್ತು ಕಲಾವಿದರಿಗೆ ಅಪಾರ ಅವಕಾಶಗಳನ್ನು ತೆರೆದಿರಿಸಿದೆ. ಕಲಾವಿದರು ತಂತ್ರಜ್ಞಾನ ಬಳಸಿಕೊಂಡು ವಿಶ್ವ ಮಾರುಕಟ್ಟೆಯ ಗ್ರಾಹಕರನ್ನು ತಲುಪಿ, ತಮ್ಮ ಕಲಾಕೃತಿಗಳಿಗೆ ಅರ್ಹ ಮೌಲ್ಯ ಪಡೆಯಬೇಕು ಎಂದರು.
ಲಲಿತ ಕಲಾ ಅಕಾಡೆಮಿ ಸದಸ್ಯ ಎಫ್.ವಿ. ಚಿಕ್ಕಮಠ ಮಾತನಾಡಿ, ಯುವ ಕಲಾವಿದರು ತಮ್ಮದೇ ಆದ ಅನನ್ಯ ಶೈಲಿಯನ್ನು ಸಿದ್ಧಿಸಿಕೊಂಡು, ಅಪೂರ್ವ ಚಿತ್ರಕಲೆಗಳನ್ನು ಸೃಷ್ಟಿಸಬೇಕು. ಆರಂಭದಲ್ಲಿ ಕಲಾ ಕ್ಷೇತ್ರದ ಪರಿಭಾಷೆ, ಅಗತ್ಯತೆ ಮತ್ತು ಬಣ್ಣ-ಕ್ಯಾನ್ವಾಸ್ನ ಸಾಧ್ಯತೆಗಳನ್ನು ಅರಿಯುವುದು ಕಷ್ಟವಾಗಬಹುದು. ಆದರೆ, ಪರಿಶ್ರಮದ ಪ್ರಯತ್ನದಿಂದ ಯಶಸ್ಸು ಸಾಧಿಸಬಹುದು ಎಂದರು.
ಹಿರಿಯ ಕಲಾವಿದ ಬಂಗ್ಲೇವಾಲೆ ಮಾತನಾಡಿ, ಹಿರಿಯ ಕಲಾವಿದರ ಕೃತಿಗಳಿಂದ ಸ್ಪೂರ್ತಿ ಪಡೆಯುವುದು ತಪ್ಪಲ್ಲ. ಆದರೆ, ನಕಲು ಮಾಡುವುದು ಸರಿಯಲ್ಲ ಎಂದರು.
ಪ್ರದರ್ಶನದಲ್ಲಿ ಗದಗಿನ ಜೆ.ಎನ್. ಚಿತ್ರಕಲಾ ಮಹಾ ವಿದ್ಯಾಲಯ ಹಾಗೂ ವಿಜಯ ಕಲಾಮಂದಿರದ 14 ವಿದ್ಯಾರ್ಥಿಗಳು ತಲಾ ಮೂರು ಚಿತ್ರಕಲೆಗಳನ್ನು ಪ್ರದರ್ಶಿಸಿದ್ದಾರೆ.
ಸರ್ಕಾರಿ ಕಲಾ ಕಾಲೇಜಿನ ಪ್ರಾಚಾರ್ಯ ಎಸ್.ಕೆ. ಪತ್ತಾರ, ಬಹುರಾದೇವಿ ಬಾದಾಮಿ, ಕಲಾವಿದರಾದ ಶಂಕರ್ ಕಡಕುಂಟ್ಲಾ, ಜಿ.ಆರ್. ಮಲ್ಲಾಪುರ, ಕುಮಾರ ಕಾಟೇನಹಳ್ಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.