ADVERTISEMENT

ಜಾನಪದ ಕಲೆ ಉಳಿಸಲು ಜಾತ್ರೆಗಳು ಪೂರಕ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 5:25 IST
Last Updated 10 ಏಪ್ರಿಲ್ 2012, 5:25 IST

ಅಳ್ನಾವರ: ನಮ್ಮ ಗ್ರಾಮೀಣ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಜಾನಪದ ಕಲೆಗಳನ್ನು ಉಳಿಸಲು ಜಾತ್ರೆಯ ವೇದಿಕೆಗಳು ಸಹಕಾರಿಯಾಗಿವೆ ಎಂದು ಡಾ.ಬಸವರಾಜ ಮೂಡಬಾಗಿಲ್ ಹೇಳಿದರು.

ಪಟ್ಟಣದ ಗ್ರಾಮದೇವಿ ಜಾತ್ರೆ ಅಂಗವಾಗಿ ದೇವಿ ಪಾದಗಟ್ಟಿ ಹತ್ತಿರ ನಿರ್ಮಿಸಿದ ವೇದಿಕೆಯಲ್ಲಿ ಐದು ದಿನಗಳ ಕಾಲ ಹಮ್ಮಿಕೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಅಧುನಿಕ ಯುಗದ ಭರಾಟೆಯಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಲೆಗಳು ನಶಿಸಿಹೋಗುತ್ತಿದ್ದು, ಸೋಬಾನ ಪದ, ಗೀ ಗೀ ಪದ, ಅಲಾವಿ ಹಾಡುಗಳು ಮಾಯವಾಗುತ್ತಿವೆ. ಇಂತಹ ಕಲೆಗಳ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದರು.

ಕೃಷ್ಣಾ ಅಷ್ಟೇಕರ ಅಧ್ಯಕ್ಷತೆ ವಹಿಸಿದ್ದರು, ಧರ್ಮದರ್ಶಿ ಬಿ.ಎ. ಪಾಟೀಲ, ಜಾನಪದ ಕಲಾವಿದ ಶಂಕರಣ್ಣ ಸಂಕಣ್ಣವರ, ಎಸ್.ಬಿ. ಪಾಟೀಲ, ಸುಭಾಷ ರಾವೂತ, ಗುರುರಾಜ ಸಬನೀಸ್, ಡಿ.ಎನ್.ಲಲಿತಾ, ಬಾಬು ಸುಣಗಾರ ಮುಂತಾದವರು ಹಾಜರಿದ್ದರು,

ಜಾತ್ರೆಯ ಯಶಸ್ವಿಗೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು. ಎಸ್.ಜಿ.ಗೌರಿ ಸ್ವಾಗತಿಸಿದರು. ಲಕ್ಷ್ಮಿ ಸಾತೇರಿ ನಿರೂಪಿಸಿದರು. ಪುಂಡಲಿಕ ಪಾರದಿ ವಂದಿಸಿದರು. ನಂತರ ರೋಣ ತಾಲ್ಲೂಕಿನ ಅರುಣೋದಯ ಕಲಾ ತಂಡದವರು ನಡೆಸಿಕೊಟ್ಟ ಜಾನಪದ ಕಾರ್ಯಕ್ರಮ ನೆರೆದವರ ಗಮನ ಸೆಳೆಯಿತು.

ವಿಶೇಷವಾಗಿ ಜೋಗತಿ ನೃತ್ಯ ನೋಡಲು ಜನ ಮಧ್ಯೆ ರಾತ್ರಿಯವರೆಗೆ ಕಾಯ್ದು ಕುಳಿತಿದ್ದರು. ಟಿ.ವಿ. ಕಲಾವಿದ ಬಸವರಾಜ ಪಾಗಾದ ಅವರ ಹಾಸ್ಯ ಚಟಾಕಿಗಳ ನಡುವೆ ವಿವಿಧ ಜಾನಪದ ಕಲೆಗಳು ಜನರ ಮನಸ್ಸನ್ನು ಮುದಗೊಳಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.