ADVERTISEMENT

‘ಜೇನು ಸಾಕಣೆಯಿಂದ ಆರ್ಥಿಕ ಬಲ ಸಾಧ್ಯ’

ಅಳ್ನಾವರದಲ್ಲಿ ವಿಶ್ವ ಜೇನು ದುಂಬಿ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 21 ಮೇ 2018, 6:23 IST
Last Updated 21 ಮೇ 2018, 6:23 IST

ಅಳ್ನಾವರ: ಜೇನು ದುಂಬಿಯ ಸಾಕಾಣಿಕೆಯಿಂದ ಪರಿಸರದಲ್ಲಿ ಸಮತೋಲನ ಕಾಪಾಡಬಹುದು ಎಂದು ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಎಸ್ ರಮೇಶ ಅಭಿಪ್ರಾಯಪಟ್ಟರು.

ಇಲ್ಲಿನ ಜೇನು ಸಾಕಾಣಿಕೆ ಕೇಂದ್ರದಲ್ಲಿ ಜಿಲ್ಲಾ ಪಂಚಾಯ್ತಿ ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ವಿಶ್ವ ಜೇನು ದುಂಬಿ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಜೇನು ಕೃಷಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ನೈಸರ್ಗಿಕವಾದ ಸಂಪನ್ಮೂಲಗಳ ಉಪಯೋಗಕ್ಕೆ ಜೇನು ಸಾಕಾಣಿಕೆ ಅವಶ್ಯ. ಇದನ್ನು ಉಪ ಕಸಬು ಆಗಿ ಮಾಡಿಕೊಂಡಿ ಆರ್ಥಿಕವಾಗಿ ಸಬಲರಾಗಬಹುದು. ಜೇನು ನಮಗೆ ಉತ್ತಮ ನಿಸರ್ಗ, ಆರೋಗ್ಯ, ಆರ್ಥಿಕ ಬಲ ಕೊಡಬಲ್ಲದು ಎಂದರು.

ADVERTISEMENT

ಜೇನು ದುಂಬಿಗಳ ವಿಶಿಷ್ಟ ಹಾಗೂ ಅಚ್ಚುಕಟ್ಟಾದ ಜೀವನ ಶೈಲಿ, ಬಿಡುವಿಲ್ಲದೆ ಬದುಕು, ಮಾನವನ ಜೀವನ ಕ್ರಮಕ್ಕೆ ಮಾರ್ಗಸೂಚಿಯಾಗಿದೆ. ಜೇನು ತುಪ್ಪದ ಉತ್ಪಾದನೆ ಶ್ರೇಷ್ಠ ಆಹಾರವಾಗಿದೆ. ಇದನ್ನು ಔಷಧಿ ತಯಾರಿಸಲು ಬಳಸುತ್ತಾರೆ ಎಂದರು.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಡಾ. ರಾಮಚಂದ್ರ ಮಡಿವಾಳ ಪ್ರಾತ್ಯಕ್ಷಿಕೆ ಮೂಲಕ ಜೇನು ಸಾಕಾಣಿಕೆಯ ಮಹತ್ವ ತಿಳಿಸಿ, ಜೇನು ಸಾಕಾಣಿಕೆಯಿಂದ ಸಾಕಷ್ಟು ಲಾಭ ಪಡೆಯಬಹುದು. ಸರ್ಕಾರ ಜೇನು ಸಾಕಾಣಿಕೆಗೆ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಇದರ ಲಾಭ ಪಡೆದುಕೊಂಡು ಜೇನು ಸಂತತಿ ಉಳಿಸಿ ಬೆಳೆಸಲು ಮುಂದಾಗಿ ಎಂದರು. ಕೀಟ ತಜ್ಞರಾದ ಡಾ. ಸುವರ್ಣಾ ಪಾಟೀಲ ಮಾತನಾಡಿ, ಜೇನು ದುಂಬಿಗಳು ಆಹಾರ ಸಂಗ್ರಹಣಾ ಕಾರ್ಯದಲ್ಲಿ ತಮಗರಿವಿಲ್ಲದಂತೆ ಹೂಗಳಲ್ಲಿ ನಡೆಸುವ

ಪರಕೀಯ ಪರಾಗ ಸ್ಪರ್ಶ ಕ್ರಿಯೆಯಿಂದ ಬೆಳೆಗಳು ಉತ್ತಮ ಗುಣಮಟ್ಟ ಹೊಂದುವ ಮೂಲಕ ಇಳುವರಿ ಗಣನೀಯವಾಗಿ ಹೆಚ್ಚುತ್ತದೆ. ಜೇನು ಸಾಕಾಣಿಕೆ ಒಂದು ಉತ್ತಮ ಹವ್ಯಾಸ, ಜೇನು ದುಂಬಿಗಳ ಜೀವನ ಕ್ರಮ ಚಟುವಟಿಕೆಗಳನ್ನು ಗಮನಿಸುವು ದರಿಂದ ಜೀವನಾದರ್ಶಗಳನ್ನು ರೂಡಿಸಿಕೊಂಡು ಉತ್ತಮ ಆರೋಗ್ಯ ಹಾಗೂ ದೀರ್ಘಾಯಸ್ಸು ಪಡೆಯಬಹುದು ಎಂದರು.

ಪ್ರಗತಿಪರ ರೈತರಾದ ಗುರು ಹಟ್ಟಿಹೊಳಿ, ಜೇನು ತರಬೇತುದಾರ ಎಂ. ವೆಂಕಟೇಶ, ಜಯಶ್ರೀ ಉಡುಪಿ, ಚೆನ್ನು ಮೂಲಿಮನಿ, ಹೂಲಿ, ಶಿವಾನಂದ ಅಂಬಿ, ಪ್ರವೀಣ ಕಮಾಟಿ, ಮಂಜುಳಾ ಮೇದಾರ,ಕೆ.ಜಿ.ಬಡವಣ್ಣವರ, ವಿಜಯಕುಮಾರ, ಸಿದ್ಧಾರೂಢ ಮಿನಕಿ, ಕೆ.ಎಸ್. ವಿಠ್ಠಲ, ರಾಜಶೇಖರ ರಾಜಣ್ಣವರ, ಸಿ.ಪುಂಡಪ್ಪ, ವಿಠ್ಠಲ ಬಗಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.