ADVERTISEMENT

ಟೀಂ ವರ್ಕ್ನಲ್ಲಿ ಖುಷಿ ಕಂಡವರು

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 9:40 IST
Last Updated 11 ಜೂನ್ 2011, 9:40 IST

ಹುಬ್ಬಳ್ಳಿ: ಒಟ್ಟಿಗೇ ಬಂದರು. ಒಂದಾಗಿಯೇ ಮರಳಿದರು. ಗೆಳೆಯನಿಗೆ ಬಂದ ದಾರಿ ಹೂ ಹಾಸಿದ್ದರೆ ಪಕ್ಕದವನ ಅದೃಷ್ಟ ಚೆನ್ನಾಗಿರಲಿಲ್ಲ. ಆದರೂ ಆತ ಇವನನ್ನು ಮೂದಲಿಸಲಿಲ್ಲ, ಈತ ಅವನ ಬಗ್ಗೆ ಮತ್ಸರಪಡಲಿಲ್ಲ.

ಅಸಮಾಧಾನಕ್ಕೆ ಅವರ ನಡುವೆ ಆಸ್ಪದ ಇರಲೇ ಇಲ್ಲ. ಅದು ಗೆಳೆತನದ ಶಕ್ತಿ, ಆ ಶಕ್ತಿಯೊಂದಿಗೆ ಅವರು ಒಗ್ಗಟ್ಟಿನ ಬಲವನ್ನು ಇನ್ನಷ್ಟು ವೃದ್ಧಿಸಿದರು, ಉದ್ಯೋಗ ಮೇಳದ `ಲಾಭ~ ಗಳಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಉದ್ಯೋಗ ಮೇಳದಲ್ಲಿ ಈ ರೀತಿ ಒಗ್ಗಟ್ಟು ಪ್ರದರ್ಶಿಸಿದ್ದು ಕ್ಲಾಸ್‌ಮೇಟ್‌ಗಳು, ಅಲ್ಲಿ-ಇಲ್ಲಿ ಭೇಟಿಯಾಗಿ ಗೆಳೆಯರಾದವರು ಇತ್ಯಾದಿ ಇತ್ಯಾದಿ ಮಂದಿ.

ಒಗ್ಗೂಡಿ ಉದ್ಯೋಗ ಮೇಳಕ್ಕೆ ಬಂದವರಲ್ಲಿ ಅನೇಕರು ಉದ್ಯೋಗ ಗಿಟ್ಟಿಸಿಕೊಳ್ಳುವ ಭರವಸೆಯೊಂದಿಗೆ ವಾಪಸಾದರು. ಕೆಲವರಿಗೆ ಅವರ ಅರ್ಹತೆಗೆ ತಕ್ಕ, ನಿರೀಕ್ಷೆ ಕೈಗೂಡಿಸುವ ಕೆಲಸ ಸಿಗದ ಕಾರಣ ನಿರಾಸೆಯಾಯಿತು. ಆದರೆ ಇದೆಲ್ಲವನ್ನೂ ಅವರು ಸಮಾನವಾಗಿ ಹಂಚಿಕೊಂಡರು. ಗೆಳೆಯನ ಖುಷಿಗೆ ಸ್ಪಂದಿಸಿದರು, ಬೇಸರದಲ್ಲೂ ಒಂದಾದರು.

ಉದ್ಯೋಗ ಮೇಳದ ತುಂಬ ಇಂಥ ಬಲು ಅಪರೂಪದ ಜೋಡಿಗಳು ಕಾಣಸಿಕ್ಕಿದರು. ನೋಂದಣಿ ಕೇಂದ್ರ ದಿಂದ ಹಿಡಿದು ಮಳಿಗೆಗಳಲ್ಲಿ ನಡೆದ ಸಂದರ್ಶನದವರೆಗೂ ಅವರು ಒಂದಾ ಗಿಯೇ ಇದ್ದರು. ಒಂದಾಗಿಯೇ ಪ್ರಮಾಣಪತ್ರಗಳನ್ನು ಒದಗಿಸಿದರು, ಒಂದಾಗಿಯೇ `ಪರೀಕ್ಷೆ~ಯನ್ನು ಎದುರಿ ಸಿದರು.

ನರಗುಂದದಿಂದ ನಾಲ್ವರು ಗೆಳೆಯ ರೊಂದಿಗೆ ಬಂದ ಐಟಿಐ ಪದವಿ ಪಡೆದ ವಿಜಯಕುಮಾರ ಅವರಿಗೆ ಕಂಪೆನಿ ಯೊಂದು ಮುಂದಿನ ವಾರ ತಾರಿಹಾಳ ದಲ್ಲಿರುವ ಕಚೇರಿಗೆ ಬಂದು ಉದ್ಯೋಗಕ್ಕೆ ಸೇರಿಕೊಳ್ಳುವಂತೆ ಸೂಚಿ ಸಿತು. ಜೊತೆಗಿದ್ದವರು ಆ ಕಂಪೆನಿಯ ಸಂದರ್ಶನದಲ್ಲಿ ಸಫಲರಾಗಲಿಲ್ಲ. ಹಾಗೆಂದು ಅವರು ಯಾರೂ ಅಲ್ಲಿಂದ ಬೇರ್ಪಡಲಿಲ್ಲ. ಪ್ರಯತ್ನ ಮುಂದು ವರಿಸಲು ಹೆಜ್ಜೆ ಹಾಕಿದರು.

`ಮೇಳಕ್ಕೆ ಬರುವಾಗ ಭರವಸೆ ಇತ್ತು. ಅದಕ್ಕೆ ತಕ್ಕಂತೆ ಕೆಲಸ ಸಿಕ್ಕಿದೆ. ಆದರೆ ಮುಂದಿನ ವಾರ ಹೋಗಿ ನೋಡಿ ಎಲ್ಲ ಸರಿಯಾಗುವುದಾದರೆ ಮಾತ್ರ ಕೆಲಸಕ್ಕೆ ಸೇರಿಕೊಳ್ಳುತ್ತೇನೆ. ಅಲ್ಲಿಯ ವರೆಗೆ ಕಾದು ನೋಡ ಬೇಕಾಗಿದೆ~ ಎಂದು ಹೇಳಿದ ವಿಜಯ ಕುಮಾರ, ಸಮಯ ಹಾಳು ಮಾಡದೆ ಗೆಳೆಯರಿಗಾಗಿ ಮುಂದೆ ಸಾಗಿದರು.

ಗದಗದ ಡಂಬಳದಿಂದ ಬಂದ ಐಟಿಐ ಪದವೀಧರೆಯರ `ಟೀಂ~ ಕೂಡ ಉದ್ಯೋಗದ ಹುಡುಕಾಟದಲ್ಲಿ ಬ್ಯುಸಿ ಯಾಗಿದ್ದರು. ಫೈಲ್ ಹಿಡಿದು ಕೊಂಡು ಕಂಪೆನಿಗಳ ಮಳಿಗೆ ಮುಂದೆ ನಿಂತ ಅವರು ಒಂದು ಮಳಿಗೆಯಲ್ಲಿ ಕನಿಷ್ಠ ಒಬ್ಬರಿಗಾದರೂ ಉದ್ಯೋಗ ಸಿಕ್ಕಿದರೆ ಸಾಕು ಎಂಬ ಭಾವನೆಯಲ್ಲಿದ್ದರು. ಸುವರ್ಣಾ ಹಳ್ಳಿಗೇರಿ ಹೇಳುವಂತೆ ಅವರೆಲ್ಲರೂ ಭಾರಿ ಭರವಸೆಯಿಂದಲೇ ಬಂದಿದ್ದರು. ಒಟ್ಟಿಗೆ ಹೋದರೆ ತನಗಲ್ಲ ದಿದ್ದರೂ ತನ್ನ ಗೆಳತಿಗೆ, ಇಂದಲ್ಲದಿದ್ದರೆ ಇನ್ನೊಂದು ದಿನ ನೌಕರಿ ಸಿಗಬಹುದು ಎಂಬ ನಿರೀಕ್ಷೆಯಿಂದ ಮಳಿಗೆ ಬಳಿ ನಿಂತಿದ್ದರು.

ಕಾವ್ಯಾ ಅವರ ಕಾಲಿಗೆ ಸಂಪೂರ್ಣ ಸ್ವಾಧೀನವಿಲ್ಲ. ಊರುಗೋಲು ಹಿಡಿದುಕೊಂಡು ಮಳಿಗೆ ಯಿಂದ ಮಳಿ ಗೆಗೆ ಓಡಾಡುತ್ತಿದ್ದ ಅವರಿಗೆ ಆಸರೆ ಯಾಗಿ ಗೆಳತಿ ಅನು ಇದ್ದರು. ಯಾರಿಗೆ ಉದ್ಯೋಗ ಸಿಗುತ್ತದೆಯೋ ಅವರು ಅದೃಷ್ಟಶಾಲಿಗಳು ಎಂದು ಹೇಳುತ್ತಲೇ ನಕ್ಕರು ಇಬ್ಬರು ಕೂಡ.

ಸ್ಪರ್ಧಾ ಯುಗದಲ್ಲೂ ಒಟ್ಟಿಗೆ ಹೋದರೆ ಕೆಲಸ ಸಿಗುವುದಾದರೂ ಹೇಗೆ ಎಂದು ಕೇಳಿದರೆ ರವಿ ಹಾದಿಮನಿ ಹೇಳುವ ಉತ್ತರ ಕುತೂಹಲಕರ. ಒಬ್ಬೊಬ್ಬರೇ ಹೋದರೆ ಬಹುತೇಕ ಕಂಪೆನಿಗಳು `ಕೇರ್~ ಮಾಡೋದಿಲ್ಲ. ಒಟ್ಟಾಗಿ ಹೋದರೆ ಕಂಪನಿಗಳ ಗಮನ ಸೆಳೆಯಲು ಸಾಧ್ಯವಾಗುತ್ತದೆ, ಕಂಪೆನಿ ಯವರಿಗೆ ಏಕಕಾಲದಲ್ಲಿ ಅನೇಕರ ಪ್ರಮಾಣಪತ್ರಗಳನ್ನು ನೋಡಲು ಹಾಗೂ ಸಂದರ್ಶನ ನಡೆಸಲು ಸುಲಭ ವಾಗುತ್ತದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.