ADVERTISEMENT

ನಾಯಕನೂರು: ಸಾಮರಸ್ಯ ಸ್ಥಾಪನೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 7:10 IST
Last Updated 13 ಅಕ್ಟೋಬರ್ 2011, 7:10 IST

ಧಾರವಾಡ: ನವಲಗುಂದ ತಾಲ್ಲೂಕಿನ ನಾಯಕನೂರು ಗ್ರಾಮದ ಬಹಿಷ್ಕಾರ ಘಟನೆ ಮೂಲತಃ ಎರಡು ಕುಟುಂಬಗಳ ವೈಯಕ್ತಿಕ ಘಟನೆಯಾಗಿದ್ದು, ಸಮಸ್ಯೆ ಬಗೆಹರಿಸಲು ದಲಿತ ಕುಟುಂಬಗಳಿಗೆ ರೂ 3 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು ಗ್ರಾಮದ 30 ಜನರ ಪೈಕಿ 19 ಜನರಿಗೆ 150 ಮಾನವ ದಿನಗಳ ಉದ್ಯೋಗವನ್ನು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನೀಡಲಾಗಿದೆ ಎಂದರು. ಘಟನೆಗೆ ಕಾರಣರಾದ ವ್ಯಕ್ತಿಗಳನ್ನು ಬಂಧಿಸಿ ಪೊಲೀಸ್ ಇಲಾಖೆ ಕಾನೂನು ಕ್ರಮ ಜರುಗಿಸುತ್ತಿದೆ.

ಗ್ರಾಮದಲ್ಲಿ ಎರಡೂ ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.

ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ನವಲಗುಂದ ತಾಲ್ಲೂಕಿನ ತಹಶೀಲ್ದಾರರು ಆ ವಿಷಯವಾಗಿ ಸತತ ನಿಗಾ ವಹಿಸಿದ್ದು, ಅನಪೇಕ್ಷಿತ ಘಟನೆಗಳಾಗದಂತೆ ಪೊಲೀಸ್ ಭದ್ರತೆ ನೀಡಲಾಗಿದೆ. ಅಲ್ಲಿನ ದಲಿತ ಸಮಾಜದ ಕೇರಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಒಟ್ಟು 50 ಲಕ್ಷ ರೂ. ಯೋಜನೆ ತಯಾರಿಸಿದ್ದು ಆ ಪೈಕಿ 25 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.