ADVERTISEMENT

ಪುರಂದರ ಮಂಟಪ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 7:45 IST
Last Updated 13 ಜೂನ್ 2013, 7:45 IST

ಧಾರವಾಡ: ಇಲ್ಲಿಯ ಶಂಕರಿ ಬಡಾವಣೆಯಲ್ಲಿ ಪುರಂದರೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾದ ಶ್ರೀರಾಮ ಮಂದಿರ, ರಾಘವೇಂದ್ರ ಸ್ವಾಮಿಗಳ ಮಠ ಹಾಗೂ ಪುರಂದರ ಮಂಟಪವನ್ನು ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಂತ್ರಾಲಯದ ಮಠದ ಸುಪರ್ದಿಗೆ ಇತ್ತೀಚೆಗೆ ಪುರಂದರೋತ್ಸವ ಸಮಿತಿ ಹಸ್ತಾಂತರಿಸಿತು.

ಪುರಂದರ ಮಂಟಪವನ್ನು 2007ರಲ್ಲಿ ಸುಶಮೀಂದ್ರ ತೀರ್ಥ ಶ್ರೀಪಾದರು ಹಾಗೂ ಪ್ರಸಕ್ತ ಶ್ರೀಪಾದರಾದ ಸುಯತೀಂದ್ರ ತೀರ್ಥರು ಮಂಡಲ ಪರ್ಯಂತ ಮೂಲ ಮೃತ್ತಿಕೆಗೆ ಪೂಜೆ ಸಲ್ಲಿಸಿ ಪ್ರತಿಷ್ಠಾಪಿಸಿದ್ದರು. ಕಳೆದ 15 ವರ್ಷಗಳಿಂದ ಪುರಂದರ ದಾಸರ ಆರಾಧನೆಯನ್ನು ವೈಭವಪೂರ್ವಕ ಹಾಗೂ ಅರ್ಥಪೂರ್ಣವಾಗಿ ಆಚರಿಸುತ್ತ ಬಂದಿದೆ.

ಇಲ್ಲಿಯವರೆಗೆ ಪುತ್ತಿಗೆ, ಭಂಡಾರಕೇರಿ, ಕೂಡ್ಲಿ ಅಕ್ಷೋಭ್ಯತೀರ್ಥರು, ಪ್ರಯಾಗ ಶ್ರೀಗಳು ಈ ಮಠಕ್ಕೆ ಭೇಟಿ ನೀಡಿದ್ದರು.ಈ ಮಂಟಪದ ಪ್ರಸಕ್ತ ಪೀಠಾಧಿಪತಿಗಳಾದ ಸುಯತೀಂದ್ರ ತೀರ್ಥರು ಹಾಗೂ ಕಿರಿಯ ಸ್ವಾಮಿಗಳಾದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರ ಆಜ್ಞಾನುಸಾರ, ಆಪ್ತ ಕಾರ್ಯದರ್ಶಿ ರಾಜಾ ಎಸ್‌ರಾಜಗೋಪಾಲಾಚಾರ್ಯ ಹಾಗೂ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಎಸ್. ಎನ್.ಸುಯಮೀಂದ್ರಾಚಾರ್ಯ ಅವರ ಮಾರ್ಗದರ್ಶನದಂತೆ ಮೂಲ ಸಂಸ್ಥಾನದ ಕರ್ನಾಟಕ ಪ್ರಾಂತದ ವಿಭಾಗೀಯ ವ್ಯವಸ್ಥಾಪಕ ರಾಜಾ ವಾದೀಂದ್ರಾಚಾರ್ಯರು ಈ ಪುರಂದರ ಮಂಟಪವನ್ನು ಮಂತ್ರಾಲಯದ ಮಠದ ಪರವಾಗಿ ನೋಂದಾಯಿಸಿಕೊಂಡರು.

`ಇದು ಧಾರವಾಡ ನಗರದಲ್ಲಿ ಮತ್ತೊಂದು ಮಂತ್ರಾಲಯವೆನಿಸಿದೆ' ಎಂದು ಮಠದ ಹುಬ್ಬಳ್ಳಿ ವಿಭಾಗಾಧಿಕಾರಿ ವೆಂಕಣ್ಣಾಚಾರ್ಯ ರಿತ್ತಿ ತಿಳಿಸಿದರು.ಪುರಂದರೋತ್ಸವ ಸಮಿತಿಯ ಧರ್ಮದರ್ಶಿಗಳಾದ ಪಂ.ಗೋವಿಂದರಾವ್ ನವಲಗುಂದ, ಸಿ.ನಾಗರಾಜ, ಡಾ.ಪ್ರಹ್ಲಾದ ಛಬ್ಬಿ, ಅಚ್ಯುತ್‌ರಾವ್ ಬೀಡಿಕರ, ಡಾ.ಎಸ್.ಎನ್.ಅಷ್ಟಪುತ್ರೆ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT