ADVERTISEMENT

ಪೈಪೋಟಿ ಎದುರಿಸಿ ಭವಿಷ್ಯ ರೂಪಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 10:20 IST
Last Updated 19 ಜನವರಿ 2011, 10:20 IST

ಹುಕ್ಕೇರಿ: ವಿದ್ಯಾರ್ಥಿಗಳು ಮೊಬೈಲ್ ಮತ್ತು ಅಂತರ್ಜಾಲದಲ್ಲಿಯೇ ಅನವಶ್ಯಕವಾಗಿ ಸಮಯ ಹಾಳುಮಾಡದೇ ಜಾಗತಿಕ ಪೈಪೋಟಿ ಎದುರಿಸಿ ಭವಿಷ್ಯ ರೂಪಿಸಿಕೊಳ್ಳಲು ಆದ್ಯತೆ ನೀಡಬೇಕು ಎಂದು ಬೆಂಗಳೂರಿನ ವಿದ್ಯುನ್ಮಾನ ಉಪಕರಣ ವಿತರಕ ಮಹೇಶ ಬೆಲ್ಲದ ಹೇಳಿದರು.

ತಾಲ್ಲೂಕಿನ ಶಿರಢಾಣ ಗ್ರಾಮದ ಡಾ.ಗಂಗಾಧರ ವಸತಿ ಶಾಲೆಯ 16ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು. ಭಾರತ ವೇಗದಿಂದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. ವಿದ್ಯಾರ್ಥಿಗಳು ತಂತ್ರಜ್ಞಾನದಲ್ಲಿ ನಿಪುಣರಾಗಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನ ಗಳಿಸಲು ಗಮನ ನೀಡಬೇಕು ಎಂದು ನುಡಿದರು.

ಕವಿವಿ ಧಾರವಾಡದ ಕನ್ನಡ ಪ್ರಾಧ್ಯಾಪಕ ಡಾ. ನಿಜಲಿಂಗಪ್ಪ ಮಟ್ಟಿಹಾಳ, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಉನ್ನತ ಶಿಕ್ಷಣ ಪಡೆಯಬೇಕು. ಕಲಿಸಿದ ಗುರು, ಹೆತ್ತ ತಂದೆ-ತಾಯಿಯರಿಗೆ ಒಳ್ಳೆಯ ಹೆಸರನ್ನು ತರಬೇಕು ಎಂದು ಅವರು ಹೇಳಿದರು.ಸಂಸ್ಥೆಯ ಅಧ್ಯಕ್ಷ ಬಿ.ಜಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹುಕ್ಕೇರಿ ವಿರಕ್ತಮಠದ ಆನಂದ ದೇವರು ಸಾನ್ನಿಧ್ಯ ವಹಿಸಿದ್ದರು. ನಿರ್ದೇಶಕರಾದ ಎಂ.ಐ. ನಿರ್ವಾಣಿ, ಅಶೋಕ ನೇರ್ಲಿ, ಕೆ.ಎಲ್. ಪಾಟೀಲ, ಆಡಳಿತಾಧಿಕಾರಿ ಸಿ.ಎಚ್. ಬಂಡಿ, ರಾಜು ವಗ್ಗರ ಮತ್ತಿತರು ಉಪಸ್ಥಿತರಿದ್ದರು.

ಬಹುಮಾನ: ಕಳೆದ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಶ್ರುತಿ ಯರಗಟ್ಟಿ ಅವರಿಗೆ ಚೇರಮನ್ ಬಿ.ಜಿ. ಪಾಟೀಲ ಕೊಡ ಮಾಡಿದ ‘5 ಗ್ರಾಂ ಚಿನ್ನದ ಉಂಗುರ’ ಮತ್ತು ನಗದು ಬಹುಮಾನ ವಿತರಿಸಲಾಯಿತು. ಶಿವಪ್ರಸಾದ ಬಾಗೇವಾಡಿ ಮತ್ತು ಶಿವಾನಂದ ಚೌಗಲಾ ನಂತರದ ಸ್ಥಾನ ಪಡೆದರು.ಪ್ರಾಚಾರ್ಯ ಡಿ.ಎಚ್. ಸಂಸುದ್ದಿ ಸ್ವಾಗತಿಸಿದರು. ಎಸ್.ಬಿ. ಭಜಂತ್ರಿ ವರದಿ ಓದಿದರು. ಶಿಕ್ಷಕ ಎಸ್.ಕೆ. ಪಾಟೀಲ ನಿರೂಪಿಸಿದರು. ಶೋಭಾ ಜಾಗನೂರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.