ADVERTISEMENT

ಬಯೋ ಸ್ಯಾಂಡ್ ವಾಟರ್ ಫಿಲ್ಟರ್ ವಿತರಣೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 4:30 IST
Last Updated 19 ಅಕ್ಟೋಬರ್ 2012, 4:30 IST

ಹುಬ್ಬಳ್ಳಿ: `ಶುದ್ಧ ನೀರಿನ ಲಭ್ಯತೆ ಇಂದು ಬಹುದೊಡ್ಡ ಸಮಸ್ಯೆ. ಆರ್ಥಿಕವಾಗಿ ಹಿಂದುಳಿದವರಂತೂ ನೀರು ಶುದ್ಧೀಕರಣ ಘಟಕಗಳನ್ನು ಅಳವಡಿಸಿಕೊಳ್ಳುವುದು ಕನಸಿನ ಮಾತು. ಅಂಥವರಿಗೆ ನೆರವಾಗುವ ಉದ್ದೇಶದಿಂದ `ಬಯೋ ಸ್ಯಾಂಡ್ ವಾಟರ್ ಫಿಲ್ಟರ್~ ವಿತರಣೆ ಯೋಜನೆ ಆರಂಭಿಸಲಾಗಿದೆ~ ಎಂದು ಗದಗ ರಸ್ತೆಯ ಗಾಂಧಿವಾಡದಲ್ಲಿರುವ ಬಿಲೀವರ್ಸ್ ಚರ್ಚ್ ಮುಖ್ಯಸ್ಥ ರೆ.ಫಾ. ಜೇಸುದಾಸ್ ಎಸ್.ಡಿ. ತಿಳಿಸಿದರು.

ಗದಗ ರಸ್ತೆಯ ವಿನೋಬ ನಗರದಲ್ಲಿ 30 `ಬಯೋ ಸ್ಯಾಂಡ್ ವಾಟರ್ ಫಿಲ್ಟರ್~ಗಳನ್ನು ಭಾನುವಾರ ವಿತರಿಸಿದ ಬಳಿಕ `ಪ್ರಜಾವಾಣಿ~ ಜೊತೆ ಮಾತನಾಡಿದ ಅವರು, `ಚರ್ಚ್ ವತಿಯಿಂದ ಆರಂಭಿಸಲಾದ ಸಮುದಾಯ ಕಲ್ಯಾಣ ಯೋಜನೆ ಯಡಿ ಈ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಇಂತಹ ಫಿಲ್ಟರ್‌ಗೆ ತಲಾ ಮೂರು ಸಾವಿರ ರೂಪಾಯಿ ವೆಚ್ಚ ತಗಲುತ್ತದೆ. ಜಾತಿ, ಧರ್ಮದ ತಾರತಮ್ಯವಿಲ್ಲದೆ, ಅಗತ್ಯವಿರುವವರಿಗೆ ಇದನ್ನು ಉಚಿತವಾಗಿ ನೀಡಲಾಗುವುದು~ ಎಂದರು.

`ಇತ್ತೀಚಿನ ದಿನಗಳಲ್ಲಿ ಶುದ್ಧ ನೀರಿನ ಕೊರತೆ ಇದೆ. ಮಾರುಕಟ್ಟೆಯಲ್ಲಿ ಲಭ್ಯ ಇರುವ ಫಿಲ್ಟರ್‌ಗಳು ದುಬಾರಿ ಯಾಗಿವೆ. ಆರ್ಥಿಕವಾಗಿ ಹಿಂದುಳಿ ದವರು ಅವುಗಳನ್ನು ಖರೀದಿಸುವುದು ಕಷ್ಟ. ಹೀಗಾಗಿ ಈ ಯೋಜನೆಗೆ ಚಾಲನೆ ನೀಡಲಾಗಿದೆ~ ಎಂದರು.

`ಈಗಾಗಲೇ ಚೇತನಾ ಕಾಲೊನಿಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಮೇಯರ್ ಪಾಂಡುರಂಗ ಪಾಟೀಲ ಅವರು  20 ಫಿಲ್ಟರ್‌ಗಳನ್ನು ವಿತರಿಸಿದ್ದಾರೆ. ಚರ್ಚ್ ವತಿಯಿಂದ ಪ್ರತಿ ತಿಂಗಳು 50ರಿಂದ 60 ಫಿಲ್ಟರ್ ವಿತರಿಸುವ ಉದ್ದೇಶವಿದೆ. ಅಗತ್ಯ ಇರುವವರು ಚರ್ಚ್ ಅನ್ನು ಸಂಪರ್ಕಿಸಬಹುದು.

ಅಲ್ಲದೆ ಮುಂದಿನ ದಿನಗಳಲ್ಲಿ ಸ್ವ ಉದ್ಯೋಗ ಕಂಡುಕೊಳ್ಳಲು ಬಯಸುವವರಿಗೆ ಕುರಿ, ಕೋಳಿ ವಿತರಿಸುವ ಮೂಲಕ ನೆರವು ನೀಡುವ ಯೋಜನೆಯನ್ನೂ ಹಮ್ಮಿಕೊಳ್ಳಲಾಗುವುದು~ ಎಂದರು. ಫಾ. ಜೇಸುದಾಸ್, ಪಾಲಿಕೆ ಸದಸ್ಯ ಸುವರ್ಣ ಕಲ್ಲಕುಂಟ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.