ADVERTISEMENT

ಬೆಲೆ ಏರಿಕೆ ವಿರುದ್ಧ 28ರಂದು ಸಂಯುಕ್ತ ಮುಷ್ಕರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 5:00 IST
Last Updated 11 ಫೆಬ್ರುವರಿ 2012, 5:00 IST

ಹುಬ್ಬಳ್ಳಿ: `ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಸೇರಿದಂತೆ ಹತ್ತು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಲ್ಲ ಕಾರ್ಮಿಕ ಸಂಘಟನೆಗಳು ಸಂಯುಕ್ತವಾಗಿ ಹಮ್ಮಿ ಕೊಂಡಿರುವ ರಾಷ್ಟ್ರವ್ಯಾಪಿ ಮುಷ್ಕರ ಇದೇ 28ರಂದು ನಡೆಯಲಿದೆ~ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಪ್ರಸನ್ನ ಕುಮಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

`ದೇಶದ ಕಾರ್ಮಿಕ ಚಳುವಳಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಲ್ಲರೂ ಒಂದಾಗಿ ಮುಷ್ಕರ ಹೂಡಲು ಮುಂದಾಗಿದ್ದು ಬಿ.ಎಂ.ಎಸ್, ಐ.ಎನ್.ಟಿ.ಯು.ಸಿ, ಎ.ಐ.ಟಿ.ಯು.ಸಿ, ಎಚ್.ಎಂ.ಎಸ್, ಸಿ.ಐ. ಟಿ.ಯು, ಎಲ್.ಪಿ.ಎಫ್, ಟಿ.ಯು.ಸಿ.ಸಿ, ಎ.ಐ.ಸಿ.ಸಿ. ಟಿ.ಯು, ಎ.ಐ.ಯು.ಟಿ.ಯು.ಸಿ, ಯು.ಟಿ.ಯು.ಸಿ ಮತ್ತು ಸೇವಾ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ~ ಎಂದು ಅವರು ತಿಳಿಸಿದರು.

`ಮುಷ್ಕರಕ್ಕೂ ಮುನ್ನ ಎಲ್ಲ ಜಿಲ್ಲೆಗಳಲ್ಲೂ ಸಭೆಗಳನ್ನು ನಡೆಸಲಾಗುವುದು, ಹಳ್ಳಿ-ಹಳ್ಳಿಗಳಿಗೆ ತೆರಳಿ ಮುಷ್ಕರದ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದ ಅವರು, ಬೆಲೆ ಏರಿಕೆಗೆ ಸಂಬಂಧಿಸಿ ಯಾರಿಗೂ ಸರಿಯಾದ ಮಾಹಿತಿ ಇಲ್ಲ. ಅನೇಕರು ಇದು ಸಾಮಾನ್ಯ ವಿಷಯ, ಇದರಿಂದ ಹೊರಬರಲು ಸಾಧ್ಯವಿಲ್ಲ ಎಂದು ತಿಳಿದುಕೊಂಡಿದ್ದಾರೆ. ಆದರೆ ವಾಸ್ತವ ಬೇರೆಯೇ ಇದೆ. ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರಗಳು ಯಾವುದೇ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬುದನ್ನು ಹೆಚ್ಚಿನವರಿಗೆ ಮಾಹಿತಿ ಇಲ್ಲ~ ಎಂದು ಅವರು ಹೇಳಿದರು.

ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು, ಉದ್ಯೋಗ ಸೃಷ್ಟಿಸಲು ಹಾಗೂ ಉಳಿಸಲು ಮುಂದಾಗ ಬೇಕು, ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಎಲ್ಲ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು, ಲಾಭದಾಯಕ ಸಾರ್ವಜನಿಕ ಕೇತ್ರದ ಷೇರು ಮಾರಾಟವನ್ನು ತಡೆಯಬೇಕು, ಕಾಯಂ ಹಾಗೂ ನಿರಂತರ ಸ್ವರೂಪದ ಕೆಲಸಗಳನ್ನು ಗುತ್ತಿಗೆ ಪದ್ಧತಿಯಲ್ಲಿ ನಿರ್ವಹಿಸುವುದನ್ನು ರದ್ದು ಮಾಡಬೇಕು, ಕನಿಷ್ಟ ಕೂಲಿಯನ್ನು ಹತ್ತು ಸಾವಿರ ರೂಪಾಯಿಗೆ ಏರಿಸಬೇಕು, ಬೋನಸ್ ಹಾಗೂ ಭವಿಷ್ಯನಿಧಿ ಪಾವತಿಗೆ ಇರುವ ಎಲ್ಲ ಮಿತಿ ಹಾಗೂ ಅರ್ಹತೆಯನ್ನು ತೆಗೆದು ಹಾಕಿ ಗ್ರಾಚ್ಯುಟಿ ಮೊತ್ತವನ್ನು ಏರಿಸಬೇಕು ಎಂದು ಅವರು ತಿಳಿಸಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಚ್. ಆಯಿ, ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಉಪಾಧ್ಯಕ್ಷ ದುರುಗಪ್ಪ ಚಿಕ್ಕತುಂಬಳ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.