ಧಾರವಾಡ: ನಷ್ಟದಿಂದ ಕಂಗೆಟ್ಟಿರುವ ರೈತರಿಗೆ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಳೆದ ನಾಲ್ಕು ವರ್ಷಗಳಿಂದ ಬರಗಾಲ ಹಾಗೂ ಅತಿವೃಷ್ಟಿಯಿಂದ ರೈತರ ಜೀವನ ಸಾಗಿಸುವುದು ಕಷ್ಟವಾಗಿದೆ. ರೈತರು ತುಂಬಿದ ವಿಮೆ ಅವರ ಕೈಗೆಟುಕಿಲ್ಲ. ಇದರಿಂದಾಗಿ ತೀವ್ರವಾಗಿ ನೊಂದಿರುವ ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ’ ಪ್ರತಿಭಟನಾಕಾರರು ಕಳವಳ ವ್ಯಕ್ತ
ಪಡಿಸಿದರು.
‘ವ್ಯವಸಾಯಕ್ಕೆ ಹಣವಿಲ್ಲದೆ ಪರದಾಡುವಂತಾಗಿದೆ. ಇಂಥ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರೈತರ ನೆರವಿಗೆ ಬರಬೇಕು. ಸಂಬಂಧಪಟ್ಟವರ ಬಳಿ ಕೂಡಲೇ ಚರ್ಚಿಸಿ, ಬೆಳೆ ವಿಮೆ ಹಾಗೂ ಪರಿಹಾರ ನೀಡುವಂತೆ ಸೂಚಿಸಬೇಕು’ ಎಂದು ಆಗ್ರಹಿಸಿದರು.
‘ಚಿಕ್ಕಮಲ್ಲಿಗವಾಡದ ಬಡ ರೈತ ಕುಟುಂಬಗಳು ಅರಣ್ಯ ಖಾತೆಯ ಕೆಟನಹಟ್ಟಿ ಗ್ರಾಮದ ಜಮೀನಿನಲ್ಲಿ ಪೂರ್ವಜರ ಕಾಲದಿಂದ ಸಾಗುವಳಿ ಮಾಡಿಕೊಂಡು ಉಪಜೀವನ ನಡೆಸುತ್ತಿವೆ. ಅರಣ್ಯ ಇಲಾಖೆಯು ಆ ಜಮೀನಿನಲ್ಲಿ ಅಕೇಸಿಯಾ ಸಸಿಗಳನ್ನು ನೆಟ್ಟಿತ್ತು. ಹೀಗಿದ್ದರೂ, ರೈತರು ನಡುವೆ ಸಾಗುವಳಿ ಮಾಡುತ್ತಿದ್ದರು. ಈಗ ಸಸಿಗಳು ಬೆಳೆದು ಮರಗಳಾಗಿವೆ. ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಏಳು ದಿನಗಳ ಒಳಗಾಗಿ ಸಾಗುವಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.ಇದಕ್ಕೂ ಮುನ್ನ ಕಲಾಭವನದಿಂದ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.