ADVERTISEMENT

ಮಕ್ಕಳ ಚಲನಚಿತ್ರೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 5:30 IST
Last Updated 18 ಫೆಬ್ರುವರಿ 2012, 5:30 IST

ಧಾರವಾಡ: `ಹಿಂದೆ ಪ್ರತಿಭಾವಂತ ನಿರ್ದೇಶಕರಿಂದ ಮಕ್ಕಳಿಗಾಗಿ ತಯಾರಿಸ್ಪಟ್ಟ ಸರ್ವಕಾಲಿಕ ಮೌಲ್ಯಗಳ ಸಿನಿಮಾಗಳು ಇಂದಿಗೂ ನೆನಪಿನಲ್ಲಿ ಅಚ್ಚಳಿಯದಂತೆ ಉಳಿದಿವೆ. ಮಕ್ಕಳ ಬುದ್ಧಿ, ಚಿಂತನೆ ವಿಕಸನಕ್ಕೆ ಚಲನಚಿತ್ರ ಬಹಳ ಪರಿಣಾಮಕಾರಿ ಮಾಧ್ಯಮಾಗಿದೆ~ ಎಂದು ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು.

ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಚಿಲ್ರನ್ಸ್ ಇಂಡಿಯಾ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ಮಕ್ಕಳ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಕಾರ್ಯಕ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಸಂಪೂರ್ಣ ವ್ಯಕ್ತಿತ್ವ ನಿರೂಪಣೆ ಅಗತ್ಯದ ಕಥಾವಸ್ತುಗಳುಳ್ಳ ಮಕ್ಕಳ ಚಿತ್ರಗಳು ಇಂದು ನಿರ್ಮಾಣ ಗೊಳ್ಳಬೇಕು ಎಂದರು.

ಚಲನಚಿತ್ರ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಮಾತನಾಡಿ, ಚಿಲ್ರನ್ ಸಂಸ್ಥೆಯು ಕಳೆದ 8 ವರ್ಷಗಳಿಂದ ಮಕ್ಕಳ ಚಲನಚಿತ್ರೋತ್ಸವಗಳನ್ನು ಆಯೋಜಿಸುತ್ತಿದೆ.
 
ಇಂದಿನ ಜಾಗತೀಕರಣ ಹಾಗೂ ಪೈಪೋಟಿ ದಿನಗಳ ನಿಟ್ಟಿನಲ್ಲಿ ಬೇರೆ ಬೇರೆ ರಾಷ್ಟ್ರಗಳ ವಿಭಿನ್ನ ಸಂಸ್ಕೃತಿ, ಭಾಷೆ, ಮಕ್ಕಳ ಅಭಿರುಚಿ ಹಾಗೂ ಅವರ ಪ್ರತಿಭೆ ತಿಳಿದುಕೊಳ್ಳಲು ಇಂತಹ ಚಲನ ಚಿತ್ರೋತ್ಸವಗಳು ಸಹಾಯಕವಾಗಿವೆ ಎಂದು ಹೇಳಿದರು.

ಮುಖ್ಯಮಂತ್ರಿ ಸದಾನಂದಗೌಡ ಅವರು ಮಕ್ಕಳ ಚಿತ್ರ ನಿರ್ಮಿಸಲು 25 ಲಕ್ಷ ರೂಪಾಯಿಯ ಸಹಾಯ ಧನವನ್ನು ಈಗಿರುವ ಎರಡರಿಂದ ನಾಲ್ಕು ಚಿತ್ರಗಳಿಗೆ ಹೆಚ್ಚಿಸಿರುವುದು ಸಂತಸದ ಸಂಗತಿ ಎಂದರು.
ಜಿಲ್ಲಾಧಿಕಾರಿ ದರ್ಪಣ ಜೈನ್ ಮಾತನಾಡಿ, ಮಕ್ಕಳ ಚಲನಚಿತ್ರೋತ್ಸವಕ್ಕೆ ಇಲ್ಲಿನ ಕಲಾಭವನದಲ್ಲಿ ಎಲ್‌ಸಿಡಿ ಸೌಲಭ್ಯ ಒದಗಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು.
 

ಅವಳಿನಗರ ದಲ್ಲಿರುವ ಸಾಧನಕೇರಿ, ಕಿತ್ತೂರು ಚೆನ್ನಮ್ಮ ಉದ್ಯಾನವನ, ಇಂದಿರಾ ಗ್ಲಾಸ್‌ಹೌಸ್, ನೃಪತುಂಗ ಬೆಟ್ಟ ಹಾಗೂ ಸಾರ್ವಜನಿಕರ ವೀಕ್ಷಣೆಗೆ ಸಾಧ್ಯವಾಗುವ ಉಣಕಲ್ ಕೆರೆ, ಇವುಗಳಲ್ಲೆಲ್ಲ ಬಯಲು ಮಂದಿರಗಳ ವ್ಯವಸ್ಥೆ ಇದ್ದು ವಾರಕ್ಕೊಂದು ಮಕ್ಕಳ ಚಲನಚಿತ್ರವನ್ನು ಪ್ರದರ್ಶಿಸಲು ಬಾಲ ವಿಕಾಸ ಅಕಾಡೆಮಿ ಕ್ರಮ ಕೈಗೊಳ್ಳ ಬಹುದಾಗಿದೆ. ಚಿತ್ರಗಳನ್ನು ಪ್ರದರ್ಶಿ ಸಲು ಅಗತ್ಯ ಸೌಕರ್ಯವುಳ್ಳ ಸಮುದಾಯಭವನಗಳ ಉಪಯೋಗ ಪಡೆದುಕೊಳ್ಳಲು ಸಲಹೆ ನೀಡಿದ ಅವರು, ಕಾರ್ಟೂನ್ ಚಿತ್ರಗಳ ನೆಪದಲ್ಲಿ ಕೌಟುಂಬಿಕ ಮೌಲ್ಯಗಳನ್ನು ಧಿಕ್ಕರಿಸುವ ಚಿತ್ರಗಳ ಬಗ್ಗೆ ಪಾಲಕರು ಮತ್ತು ಮಕ್ಕಳು ಎಚ್ಚರವಹಿಸಬೇಕು ಎಂದರು.

ಮೇಯರ ಪೂರ್ಣಾ ಪಾಟೀಲ ಮಾತನಾಡಿ, ಮುಂದಿನ ವಾರದಿಂದ ಬಾಲ ವಿಕಾಸ ಅಕಾಡೆಮಿ ಯ ಸಹಯೋಗದಲ್ಲಿ ಪ್ರತಿ ವಾರ್ಡ್ ನಲ್ಲಿಯೂ ಮಕ್ಕಳಿಗಾಗಿ ಕಾರ್ಯಕ್ರಮ ವನ್ನು ಆಯೋಜಿಸಿ, ಮಕ್ಕಳ ಚಲನಚಿತ್ರ  ಪ್ರದರ್ಶನಕ್ಕೆ ಏರ್ಪಾಡು ಮಾಡಲಾಗುವುದು ಎಂದರು. ಮಹೆಶ ಟೆಂಗಿನಕಾಯಿ ಅಧ್ಯಕ್ಷತೆ ವಹಿಸಿದ್ದರು. ಡಾ. ಗಿರಡ್ಡಿ ಗೋವಿಂದ ರಾಜ್, ರಾದ ತಿಪಟೂರು ರಘು, ಕೂಡ್ಲು ರಾಮ ಕೃಷ್ಣ,   ಕೆ. ಆನಂದ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT