ADVERTISEMENT

ಮಹಿಳಾ ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 5:45 IST
Last Updated 3 ಜನವರಿ 2012, 5:45 IST

ಹುಬ್ಬಳ್ಳಿ: `ಸಮಾಜದ ಸರ್ವತೋಮುಖ ಪ್ರಗತಿಗೆ ಮಹಿಳಾ ಶಿಕ್ಷಣ ಅವಶ್ಯಕವಾಗಿದೆ. ಇದಕ್ಕಾಗಿ ಪ್ರಾಶ್ಯಸ್ತ್ಯ ನೀಡಿ~ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕಿ ಉಷಾ ಜೋಸೆಫ್ ಸಲಹೆ ನೀಡಿದರು.

ನಗರದ ಗೋಕುಲ ರಸ್ತೆಯ ವಿಶ್ವಶ್ರಮ ಚೇತನದ ಭಾಷ್ಯಾಚಾರ್ಯ ಸಭಾಭವನದಲ್ಲಿ ಕೆ.ಎಸ್. ಶರ್ಮಾ ಅವರ ತಾಯಿ ಸಂಪತ್ತಮ್ಮನವರ 14ನೇ ವಾರ್ಷಿಕ ಸಂಸ್ಮರಣ ದಿನಾಚರಣೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

`ಮಹಿಳೆಯರ ಮೇಲೆ ಶೋಷಣೆ, ದೌರ್ಜನ್ಯಗಳು ನಿಲ್ಲಬೇಕಾದರೆ, ಮಹಿಳೆಯರು ಶಿಕ್ಷಣ ಪಡೆಯುವುದು ಅಗತ್ಯವಾಗಿದೆ. ಜೊತೆಗೆ ಮಹಿಳೆಯರು ಸಬಲರಾಗಬೇಕು~ ಎಂದರು.

ಅಧ್ಯಕ್ಷತೆ ವಹಿಸಿದ್ದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಥಿಯರಿ ಆ್ಯಂಡ್ ಪ್ರ್ಯಾಕ್ಟೀಸ್‌ನ ಗೌರವ ನಿರ್ದೇಶಕ ಡಾ. ಕೆ. ರಾಘವೇಂದ್ರರಾವ್ `ಮಹಿಳಾ ಶಿಕ್ಷಣವನ್ನು ಪ್ರತ್ಯೇಕಿಸಿ ನಾವು ಪರಿಶೀಲಿಸುತ್ತೆವೆ. ಆದರೆ ಈ ಸಮಸ್ಯೆಯನ್ನು ಪ್ರಸ್ತುತವಾಗಿ ಪುರುಷ-ಪ್ರಧಾನ ಹಾಗೂ ಬಂಡವಾಳಶಾಹಿ ವ್ಯವಸ್ಥೆಗಳ ನಡುವೆ ಅಧ್ಯಯನ ಮಾಡಬೇಕು. ಈ ವ್ಯವಸ್ಥೆಯಲ್ಲಿ ಮಹಿಳಾ ಶಿಕ್ಷಣವಾಗಲಿ, ಮಹಿಳಾ ವಿಮೋಚನೆಯಾಗಲಿ ಅಸಾಧ್ಯ. ಅಂತೆಯೇ ಶೋಷಣಾಮಯ ವ್ಯವಸ್ಥೆಯ ನಿರ್ಮೂಲನೆಗೆ ಶೋಷಿತ ಸ್ತ್ರೀ ಹಾಗೂ ಶೋಷಿತ ಪುರುಷ ಇವರಿಬ್ಬರೂ ಕೂಡಿ ಹೋರಾಡುವುದು ಅವಶ್ಯಕವಾಗಿದೆ. ಮಹಿಳೆಯರು ಕ್ರಾಂತಿಕಾರಿ ಹೋರಾಟದಲ್ಲಿ ತೊಡಗಿದಾಗ ಮಾತ್ರ ಮಹಿಳಾ ಶೋಷಣೆ ಅಂತ್ಯಗೊಳ್ಳಬಲ್ಲದು ಎಂದು ಕಿವಿಮಾತು ಹೇಳಿದರು.

ಬೇಂದ್ರೆ ಸಂಶೋಧನ ಸಂಸ್ಥೆ ಸಹನಿರ್ದೇಶಕ ಡಾ.ವಾಮನ ಬೇಂದ್ರೆ, ಸಂಪತ್ತಮ್ಮ ಅವರ ಹೃದಯ ವೈಶಾಲ್ಯತೆ, ಅನ್ನದಾನ ಮಾಡುತ್ತಿದ್ದ ಬಗೆ ಹಾಗೂ ಅವರ ಕರುಣಾಮಯಿ ಸ್ವಭಾವ ಕುರಿತು ಹೇಳಿದರು.

ಡಾ. ಕೆ.ಎಸ್. ಶರ್ಮಾ ಹಾಗೂ ಜೋಸೆಫ್ ಹಾಜರಿದ್ದರು. ದ.ರಾ. ಬೇಂದ್ರೆ ಅವರ `ಗಂಗಾವತರಣ~ ಕವನ ಸಂಕಲನದ ಹೊಸ ಆವೃತ್ತಿಯನ್ನು ಸಾಹಿತಿ ಡಾ. ಜಿ.ವಿ. ಕುಲಕರ್ಣಿ ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಬಿ.ಎಫ್. ವಿಜಾಪುರ ಸ್ವಾಗತಿಸಿದರು. ರವೀಂದ್ರ ಶಿರೋಳ್ಕರ ನಿರೂಪಿಸಿದರು. ಸುಲೋಚನಾ ಪೋತ್ನೀಸ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.