ADVERTISEMENT

ಮಹಿಳೆ ವ್ಯಾಪಾರದ ಸರಕಲ್ಲ: ವಿಮಲಾ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2013, 8:04 IST
Last Updated 22 ಫೆಬ್ರುವರಿ 2013, 8:04 IST
ಕರ್ನಾಟಕ ವಿ.ವಿ.ಯ ಸಮಾಜ ಕಾರ್ಯ ಅಧ್ಯಯನ ವಿಭಾಗವು ಗುರುವಾರ ಧಾರವಾಡದಲ್ಲಿ ಏರ್ಪಡಿಸಿದ್ದ `ಸಮಾಜ ಕಾರ್ಯದ ಬದಲಾಗುತ್ತಿರುವ ಮುಖಗಳು; ನೂತನ ಸಂವತ್ಸರದಲ್ಲಿ ಸಮಾಜ ಕಾರ್ಯ ವೃತ್ತಿ' ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ರಾಜ್ಯ ಕಾನೂನು ವಿ.ವಿ. ಕುಲಪತಿ ಡಾ.ಟಿ.ಆರ್. ಸುಬ್ರಹ್ಮಣ್ಯ (ಮಧ್ಯದಲ್ಲಿ) ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಚಿತ್ರದಲ್ಲಿ ಪ್ರೊ.ಎಸ್.ಆರ್. ಪಾಟೀಲ, ಪ್ರೊ.ಎಸ್.ಎಲ್. ಸಂಗಮ, ಪ್ರೊ.ವಿಮಲಾ ನಾಡಕರ್ಣಿ, ಎನ್.ಎ. ಗಣಿಹಾರ ಇದ್ದಾರೆ
ಕರ್ನಾಟಕ ವಿ.ವಿ.ಯ ಸಮಾಜ ಕಾರ್ಯ ಅಧ್ಯಯನ ವಿಭಾಗವು ಗುರುವಾರ ಧಾರವಾಡದಲ್ಲಿ ಏರ್ಪಡಿಸಿದ್ದ `ಸಮಾಜ ಕಾರ್ಯದ ಬದಲಾಗುತ್ತಿರುವ ಮುಖಗಳು; ನೂತನ ಸಂವತ್ಸರದಲ್ಲಿ ಸಮಾಜ ಕಾರ್ಯ ವೃತ್ತಿ' ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ರಾಜ್ಯ ಕಾನೂನು ವಿ.ವಿ. ಕುಲಪತಿ ಡಾ.ಟಿ.ಆರ್. ಸುಬ್ರಹ್ಮಣ್ಯ (ಮಧ್ಯದಲ್ಲಿ) ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಚಿತ್ರದಲ್ಲಿ ಪ್ರೊ.ಎಸ್.ಆರ್. ಪಾಟೀಲ, ಪ್ರೊ.ಎಸ್.ಎಲ್. ಸಂಗಮ, ಪ್ರೊ.ವಿಮಲಾ ನಾಡಕರ್ಣಿ, ಎನ್.ಎ. ಗಣಿಹಾರ ಇದ್ದಾರೆ   

ಧಾರವಾಡ: `ಇಂದಿನ ಮಾರುಕಟ್ಟೆ ಆಧಾರಿತ ಆರ್ಥಿಕ ವ್ಯವಸ್ಥೆಯಲ್ಲಿ ಮಹಿಳೆಯರನ್ನು ವ್ಯಾಪಾರದ ಸರಕನ್ನಾಗಿ ಪರಿಗಣಿಸಲಾಗುತ್ತಿದೆ' ಎಂದು ಮುಂಬೈನ ಟಾಟಾ ಸಮಾಜ ವಿಜ್ಞಾನ ಸಂಸ್ಥೆಯ `ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಕೇಂದ್ರ'ದ ಮುಖ್ಯಸ್ಥೆ ಪ್ರೊ. ವಿಮಲಾ ನಾಡಕರ್ಣಿ ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ಸ್ನಾತಕೋತ್ತರ ವಿಭಾಗ ನಗರದಲ್ಲಿ ಗುರುವಾರ ಏರ್ಪಡಿಸಿದ್ದ `ಸಮಾಜ ಕಾರ್ಯದ ಬದಲಾಗುತ್ತಿರುವ ಮುಖಗಳು; ನೂತನ ಸಂವತ್ಸರದಲ್ಲಿ ಸಮಾಜ ಕಾರ್ಯ ವೃತ್ತಿ' ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಆಶಯ ಭಾಷಣ ಮಾಡಿದ ಅವರು, `ಪ್ರಸ್ತುತ ಸಾಮಾಜಿಕ ವ್ಯವಸ್ಥೆ ದಿನದಿಂದ ದಿನಕ್ಕೆ ಅಮಾನವೀಯವಾಗುತ್ತಿದ್ದು, ಎಲ್ಲವನ್ನೂ ಲಾಭದ ತಕ್ಕಡಿಯಲ್ಲಿಟ್ಟು ತೂಗಲಾಗುತ್ತಿದೆ.

ಶಿಕ್ಷಣ, ಆರೋಗ್ಯ ವ್ಯವಸ್ಥೆ ವ್ಯಾಪಾರೀಕರಣಗೊಂಡಿದೆ. ಇಂಟರ್‌ನ್ಯಾಷನಲ್ ಸ್ಕೂಲ್ ಎಂಬ ಹೆಸರಿನಲ್ಲಿ ನಡೆಸಲಾಗುತ್ತಿರುವ ಶಾಲೆಗಳ ಒಳಗೆ ಹೋಗಿ ನೋಡಿದರೆ ಯಾವ ಸೌಕರ್ಯವೂ ಇರುವುದಿಲ್ಲ. ಆದರೂ ಲಕ್ಷಾಂತರ ರೂಪಾಯಿ ಡೊನೇಷನ್ ವಸೂಲಿ ಮಾಡುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ' ಎಂದರು.

`ಪಶ್ಚಿಮ ಬಂಗಾಳ ಹಾಗೂ ಬಿಹಾರದಂತಹ ರಾಜ್ಯಗಳಲ್ಲಿ ಬಡವರಿಗೆ ತಿನ್ನಲು ಎರಡು ಹೊತ್ತಿನ ಊಟಕ್ಕೂ ಗತಿ ಇಲ್ಲ. ಸಂಪತ್ತಿನ ಅಸಮಾನ ಹಂಚಿಕೆಯಿಂದಾಗಿ ಬಡವರು ಇನ್ನಷ್ಟು ಬಡವರಾಗುತ್ತಿದ್ದು, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ' ಎಂದು ಟೀಕಿಸಿದರು.

ಕರ್ನಾಟಕ ರಾಜ್ಯ ಕಾನೂನು ವಿ.ವಿ. ಕುಲಪತಿ ಡಾ.ಟಿ.ಆರ್. ಸುಬ್ರಹ್ಮಣ್ಯ ಸಮ್ಮೇಳನ ಉದ್ಘಾಟಿಸಿದರು. ಸಮಾಜ ಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಶೋಭಾದೇವಿ ಆರ್. ಪಾಟೀಲ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT