ಧಾರವಾಡ: “1994-1995 ರೊಳಗೆ ಆರಂಭವಾದ ಶಾಲಾ- ಕಾಲೇಜುಗಳನ್ನು ಸರ್ಕಾರ ಅನುದಾನಕ್ಕೊಳಪಡಿಸಲು ಬದ್ಧವಿದೆ. ಇದಕ್ಕಾಗಿ 196 ಕೋಟಿ ರೂಪಾಯಿ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಆದ್ದರಿಂದ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅವರು ನಡೆಸಿರುವ ಮುಷ್ಕರವನ್ನು ಹಿಂದಕ್ಕೆ ಪಡೆಯಬೇಕು” ಎಂದು ಶಾಸಕ ಮೋಹನ ಲಿಂಬಿಕಾಯಿ ಮನವಿ ಮಾಡಿದರು.
ಮುಷ್ಕರ ನಿರತರ ಸ್ಥಳಕ್ಕೆ ಶಾಸಕ ಚಂದ್ರಕಾಂತ ಬೆಲ್ಲದ ಅವರೊಂದಿಗೆ ತೆರಳಿದ್ದ ಲಿಂಬಿಕಾಯಿ ಅವರು ಹೊರಟ್ಟಿ ಅವರೊಂದಿಗೆ ಸಮಾಲೋಚನೆ ನಡೆಸಿ, ಮುಷ್ಕರ ಹಿಂದಕ್ಕೆ ಪಡೆಯಲು ಮನವಿ ಮಾಡಿದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಲಿಂಬಿಕಾಯಿ, ‘ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೂ ಸಹ ದೂರವಾಣಿ ಮೂಲಕ ಹೊರಟ್ಟಿ ಅವರನ್ನು ಮಾತನಾಡಿಸಲಾಯಿತು. ಪ್ರಮುಖ ಬೇಡಿಕೆಯಾದ ಅನುದಾನಕ್ಕೊಳಪಡಿಸುವುದನ್ನು ಭರವಸೆ ಸಹ ನೀಡಲಾಯಿತು. 1100 ಸಂಸ್ಥೆಗಳನ್ನು 2011-12ನೇ ಸಾಳಿನಲ್ಲಿಯೇ ಜಾರಿಗೆ ಬರುವಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೊರಟ್ಟಿ ಅವರಿಗೆ ಹೇಳಲಾಯಿತು’ ಎಂದು ತಿಳಿಸಿದರು.
ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಹೋರಾಟವನ್ನು ಕೈಬಿಡಬೇಕು ಎಂದು ಮನವಿ ಮಾಡಲಾಗಿದೆ. ಹೋರಾಟ ರಾಜಕೀಯ ತಂತ್ರವಾಗಬಾರದು. ಮುಷ್ಕರದಲ್ಲಿ ಶೇ. 90 ರಷ್ಟು ಶಿಕ್ಷಕರು ಅನುದಾನಿತ ಶಾಲೆಯವರೇ ಆಗಿದ್ದಾರೆ ಎಂದು ಲಿಂಬಿಕಾಯಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.