ADVERTISEMENT

ಮೂರನೇ ದಿನ ಮೂರು ನಾಮಪತ್ರ ಸಲ್ಲಿಕೆ

ಶುಭ ಘಳಿಗೆ: ಬಿ–ಫಾರ್ಮ್ ಇಲ್ಲದೆ ಅಮೃತ ದೇಸಾಯಿ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 6:44 IST
Last Updated 20 ಏಪ್ರಿಲ್ 2018, 6:44 IST

ಧಾರವಾಡ: ಬಿಜೆಪಿಯ ಅಮೃತ ದೇಸಾಯಿ ಗುರುವಾರ ಧಾರವಾಡ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು.ಇದೇ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ರಾಜಶೇಖರಯ್ಯ ಕಂತಿಮಠ ಹಾಗೂ ಬಸವರಾಜ ಪರಸಣ್ಣವರ ಅವರೂ ಚುನಾವಣಾಧಿಕಾರಿ ಪಿ.ಜಯಮಾಧವ ಅವರಿಗೆ ನಾಮಪತ್ರ ಸಲ್ಲಿಸಿದರು.

ಮೂರನೇ ದಿನವಾದ ಗುರುವಾರ ಶುಭ ಘಳಿಗೆ ಇದ್ದ ಕಾರಣ ಅಮೃತ ದೇಸಾಯಿ ಅವರು ಬಿ ಫಾರ್ಮ್‌ ಇಲ್ಲದೇ ನಾಮಪತ್ರ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗುರುವಾರ ಶುಭ ಘಳಿಗೆ ಇದೆ ಎಂದು ಹಿರಿಯರು ಹೇಳಿದ ಕಾರಣ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಏ. 23ರಂದು ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸುತ್ತೇನೆ’ ಎಂದರು.

ಮುಖಂಡರಾದ ತವನಪ್ಪ ಅಷ್ಟಗಿ, ಸಂಗನಗೌಡ ರಾಮನಗೌಡರ, ಸವಿತಾ ಅಮರಶೆಟ್ಟಿ, ಗುರುನಾಥ ಗೌಡರ, ನಿಜನಗೌಡ ಪಾಟೀಲ, ಶಂಕರ ಮುಗದ, ಈರಣ್ಣ ಹಪ್ಪಳಿ, ಸಂತೋಷ ದೇವರಡ್ಡಿ ಅವರೊಂದಿಗಿದ್ದರು.ಅಮೃತ ದೇಸಾಯಿ ₹8ಕೋಟಿ ಆಸ್ತಿ ಒಡೆಯರಾಗಿದ್ದಾರೆ.

ADVERTISEMENT

ಪಕ್ಷೇತರ ಅಭ್ಯರ್ಥಿಯಾಗಿ ರಾಜು ಉಮೇದುವಾರಿಕೆ

ಕಲಘಟಗಿ: ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ವಿವೇಕ ಹೋರಾಟ ಸಮಿತಿ ಅಧ್ಯಕ್ಷ ರಾಜು ಆರ್. ಕಲಘಟಗಿ ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದರು.

ಪಟ್ಟಣದ ಹನ್ನೆರಡು ಮಠದಿಂದ ವಿವೇಕ ಹೋರಾಟ ಸಮಿತಿ ಪದಾಧಿಕಾರಿಗಳು, ರೈತ ಮುಖಂಡರು ಹಾಗೂ ಅಪಾರ ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ ತಹಶೀಲ್ದಾರ್‌ ಕಚೇರಿಗೆ ತೆರಳಿದರು. ಚುನಾವಣಾ ಅಧಿಕಾರಿ ಡಾ. ಔದ್ರಮ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.

ಮಲ್ಲಿಕಾರ್ಜುನ ನಾಮಪತ್ರ ಸಲ್ಲಿಕೆ
ಕುಂದಗೋಳ:
ಇಲ್ಲಿನ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಅಕ್ಕಿ ಗುರುವಾರ ನಾಮಪತ್ರ ಸಲ್ಲಿಸಿದರು. ಚುನಾವಣಾ ಅಧಿಕಾರಿ ಬಸವರಾಜ ಕೊರವರ ನಾಮಪತ್ರ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.