ADVERTISEMENT

`ಯಡಿಯೂರಪ್ಪ ನೀಡಿದ ಅನುದಾನದಿಂದಲೇ ಅಭಿವೃದ್ಧಿ'

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 9:03 IST
Last Updated 23 ಏಪ್ರಿಲ್ 2013, 9:03 IST

ನವಲಗುಂದ: `ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧಿಕಾರವಧಿಯಲ್ಲಿ ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಯಿಂದ ಬಿಡುಗಡೆ ಮಾಡಿದ ನೂರಾರು ಕೋಟಿ ಅನುದಾನದಿಂದ ನವಲಗುಂದ ಕ್ಷೇತ್ರ ಅಭಿವೃದ್ಧಿಯಾಗಿದೇ ಹೊರತು, ಸ್ಥಳೀಯ ಶಾಸಕರ ವೈಯಕ್ತಿಕ ಶ್ರಮದಿಂದ ಮಾಡಿದ ಯಾವ ಸಾಧನೆಗಳು ಇಲ್ಲ' ಎಂದು ಮಾಜಿ ಶಾಸಕ, ಕೆಜೆಪಿ ಅಭ್ಯರ್ಥಿ ಡಾ.ಆರ್.ಬಿ. ಶಿರಿಯಣ್ಣವರ ಹೇಳಿದರು.

ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾವು ಶಾಸಕರಾಗಿದ್ದಾಗ ಮತ್ತು ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಯ ಸದಸ್ಯನಾಗಿದ್ದಾಗ ಮಾಡಿದ ಸಾಧನೆಗಳ ಬಗ್ಗೆ ವಿವರಿಸಿದರು.

ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಚುನಾವಣೆಗೆ ಔಪಚಾರಿಕವಾಗಿ ನಿಂತಿದ್ದೀರೆಂದು ಬಿಜೆಪಿಯವರು ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,  ನನಗೆ ಕ್ಷೇತ್ರದಾದ್ಯಂತ ಸಿಗುತ್ತಿರುವ ಬೆಂಬಲವನ್ನು ಸಹಿಸಲಾರದೇ ಗಾಳಿ ಸುದ್ದಿಗಳನ್ನು ಹರಿಬಿಟ್ಟು ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಮೇ 5ರಂದು ಮತದಾರರೇ ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಕಾಂಗ್ರೆಸ್ ಪಕ್ಷವೇ ನನ್ನ ಪ್ರಮುಖ ಎದುರಾಳಿಯಾಗಿದೆ ಹೊರತು ಬಿಜೆಪಿ ಅಲ್ಲವೆಂದು ಹೇಳಿದರು. ನಗರ ಘಟಕದ ಅಧ್ಯಕ್ಷರಾದ ಕೆ.ಡಿ. ಆನೇಗುಂದಿ, ಧುರೀಣರಾದ ಚೆನ್ನಪ್ಪ ಕೆಸರಪ್ಪನವರ, ಆನಂದ ಹವಳಕೋಡ, ಅನಿಲ ಸಿದ್ರಾಮಶೆಟ್ಟರ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.