ಹುಬ್ಬಳ್ಳಿ: ಸಚಿವ ಸಂತೋಷ ಲಾಡ್ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ರಾಜೀನಾಮೆಗೆ ಮುಂದಾ ಗಿದ್ದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ )ಯ ನಿರ್ದೇಶಕಿ ಡಾ. ವಸಂತಾ ಕಾಮತ್ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆ ಎನ್ನಲಾಗಿದೆ.
ಬುಧವಾರ ನಿರ್ದೇಶಕರು ಬೆಂಗಳೂರಿನಲ್ಲಿ ವೈದ್ಯ ಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಅವರನ್ನು ಭೇಟಿ ಮಾಡಿದ್ದು ಸುಮಾರು ಅರ್ಧ ತಾಸು ಚರ್ಚಿಸಿದ ನಂತರ ರಾಜೀನಾಮೆ ನೀಡದಿರಲು ತೀರ್ಮಾನಿಸಿದ್ದಾರೆ ಎಂದು ಕಿಮ್ಸ ಮೂಲಗಳು ತಿಳಿಸಿವೆ.
ಇದೇ 21ರಂದು ಬೆಂಗಳೂರಿನಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಅಡಳಿತ ಮಂಡಳಿ ಸಭೆ ನಡೆಯಲಿದೆ. ಬುಧವಾರದ ಭೇಟಿ ಸಂದರ್ಭದಲ್ಲಿ ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸಚಿವರು ನಿರ್ದೇಶಕರಿಗೆ ಸೂಚಿಸಿದ್ದಾರೆ. ಹೀಗಾಗಿ ರಾಜೀನಾಮೆ ನೀಡುವ ವಿಚಾರವನ್ನು ಪ್ರಸ್ತಾಪಿಸುವ ಅಗತ್ಯವೇ ಬೀಳಲಿಲ್ಲ. ಸಚಿವರ ಮಾತಿಗೆ ಪೂರಕ ಪ್ರತಿಕ್ರಿಯೆ ನೀಡಿ ವಸಂತಾ ಕಾಮತ್ ಹೊರಗೆ ಬಂದಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಕಳೆದ ಭಾನುವಾರ ಮುಂಜಾನೆ ಕಿಮ್ಸಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಲಾಡ್, ವಾರ್ಡ್ ಒಂದರ ಮುಂದೆ ತುಂಬಿದ ಕಸದ ಡಬ್ಬವನ್ನು ಕಂಡು ನಿರ್ದೇಶಕರನ್ನು ಹಿಗ್ಗಾಮುಗ್ಗ ಬೈದಿದ್ದರು. ಏಕವಚನ ವನ್ನೂ ಬಳಸಿದ್ದರಿಂದಾಗಿ ತೀವ್ರ ನೊಂದ ವಸಂತಾ ಕಾಮತ್ ತಕ್ಷಣ ರಜೆ ಹಾಕಿ ರಾಜೀನಾಮೆ ನೀಡಲು ಮುಂದಾಗಿದ್ದರು. ವಿಷಯ ತಿಳಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರು ನಿರ್ದೇ ಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ದುಡುಕಿನ ನಿರ್ಧಾರ ತೆಗೆದುಕೊಳ್ಳದಿರುವಂತೆ ಸೂಚಿಸಿದ್ದರು ಎಂದು ಹೇಳಲಾಗಿದ್ದು ನಿರ್ದೇಶಕರು ಸಚಿವರನ್ನು ಭೇಟಿಯಾಗಲು ಅವಕಾಶ ನೀಡುವವರೆಗೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ ಬುಧವಾರ ಭೇಟಿಯನ್ನು ನಿಗದಿ ಮಾಡಲಾಗಿತ್ತು.
ಮತ್ತೆ ಲಾಡ್ ಭೇಟಿಯ ಆತಂಕ
ಅತ್ತ ನಿರ್ದೇಶಕರು ಬೆಂಗಳೂರಿಗೆ ತೆರಳಿದ್ದರೆ ಇತ್ತ ಕಿಮ್ಸನಲ್ಲಿ ಬುಧವಾರವಿಡೀ ಸಿಬ್ಬಂದಿ ಲಾಡ್ ಭೇಟಿಯ ಆತಂಕದಲ್ಲಿದ್ದರು. ಕಳೆದ ಶನಿವಾರ ರಾತ್ರಿಯಿಂದ ಭಾನುವಾರ ರಾತ್ರಿಯ ವರೆಗೆ ಒಟ್ಟು ಐದು ಬಾರಿ ಕಿಮ್ಸಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಲಾಡ್, ಆರೋಗ್ಯ ಸಚಿವ ಯು.ಟಿ.ಖಾದರ್ ಜೊತೆ ಬುಧವಾರ ನಗರದಲ್ಲಿದ್ದರು. ಹೀಗಾಗಿ ಉಭಯ ಸಚಿವರು ಯಾವುದೇ ಕ್ಷಣದಲ್ಲಿ ಕಿಮ್ಸಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂಬ ಮಾತು ಸಂಸ್ಥೆಯಲ್ಲಿ ಕೇಳಿಬರುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.