ADVERTISEMENT

ಶಿಕ್ಷಣ, ಆಡಳಿತ ಸುಧಾರಣೆಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 10:35 IST
Last Updated 10 ಮಾರ್ಚ್ 2011, 10:35 IST

ಧಾರವಾಡ: “ಇಲ್ಲಿನ ಅಂಜುಮನ್ ಇಸ್ಲಾಂ ಸಂಸ್ಥೆಯ ಆದಾಯವನ್ನು ಹೆಚ್ಚಿಸುವ ಮೂಲಕ ಆಡಳಿತ ಸುಧಾರಣೆಗೆ ಹಾಗೂ ಶೈಕ್ಷಣಿಕ ಜಾಗೃತಿ ಮೂಡಿಸಲು ಆದ್ಯತೆ ನೀಡಲಾಗುವುದು” ಎಂದು ನೂತನ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ ತಮಾಟಗಾರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸುಮಾರು 70 ಕೊಟಿ ರೂ. ಆಸ್ತಿ ಹೊಂದಿರುವ ಸಂಸ್ಥೆಯ ಹಳೆಯ ವಾಣಿಜ್ಯ ಕಟ್ಟಡವನ್ನು ತೆರವುಗೊಳಿಸಿ, ಮೂರು ಮಹಡಿಯ ಕಟ್ಟಡವನ್ನಾಗಿ ನಿರ್ಮಿಸಲಾಗುವುದು.

ಈಗಿರುವ ಅಂಗಡಿಕಾರರಿಗೆ ನೆಲಮಹಡಿಯಲ್ಲಿ ಇಂದಿನ ಮಾರುಕಟ್ಟೆ ಧಾರಣೆಯ ಪ್ರಕಾರ ಬಾಡಿಗೆಗೆ ನೀಡಲಾಗುವುದು. ಈ ಮೂಲಕ ಆದಾಯ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಸಮಾಜದಲ್ಲಿ ಶೈಕ್ಷಣಿಕ ಪ್ರಮಾಣ ಕಡಿಮೆಯಿದೆ. ಸಮಾಜದ ಬಾಲಕಿಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಸುಧಾರಿಸಲು ಆದ್ಯತೆ ನೀಡಲಾಗುವುದು. ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ನಗರದಲ್ಲಿರುವ ಸರ್ಕಾರಿ ಉರ್ದು ಶಾಲೆಗಳಿಗೆ ಭೇಟಿ ನೀಡಿ ಗುಣಮಟ್ಟದ ಶಿಕ್ಷಣ ಒದಗಿಸಲು ಮನವಿ ಮಾಡಲಾಗುವುದು. ಸಮಾಜದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಹೇಳಿದರು.

ಸಂಸ್ಥೆಯ ಕಾಲೇಜಿನಲ್ಲಿ ಎಂಸಿಎ ಹಾಗೂ ಎಂಬಿಎ ಕೋರ್ಸುಗಳನ್ನು ಆರಂಭಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಹಾಗೂ ಉದ್ಯೋಗಾವಕಾಶಕ್ಕಾಗಿ ಪ್ಲೇಸ್‌ಮೆಂಟ್ ಘಟಕ ಆರಂಭಿಸಲಾಗುವುದು ಎಂದರು. ಸಂಸ್ಥೆಯ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆ ನಡೆಸಲಾಗುವುದು ಎಂದ ಅವರು, ಸರ್ಕಾರ ಮತ್ತು ವಕ್ಫ್‌ಬೋರ್ಡನಿಂದ ಸಿಗುವ ಎಲ್ಲ ಸೌಲಭ್ಯ ಪಡೆಯಲು ಸಧ್ಯದಲ್ಲಿಯೇ ಸಮಿತಿಯೊಂದನ್ನು ರಚಿಸಲಾಗುವುದು.

ವೃತ್ತಿಪರ ಕೋರ್ಸುಗಳ ಆರಂಭಕ್ಕೆ 25 ಎಕರೆ ಜಮೀನು ನೀಡುವಂತೆ ಕೇಳಲಾಗಿದೆ. ಸಮಾಜದ ಎಲ್ಲ ಹಿರಿಯರ ಸಲಹೆ- ಸೂಚನೆಗಳನ್ನು ಪಡೆದು ಸಮಾಜ ಮತ್ತು ಸಂಸ್ಥೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಹೇಳಿದರು. ನಿಜಾಮುದ್ದೀನ್ ಶೇಖ್, ಖಲೀಲ ಅಹಮ್ಮದ್ ದಾಸನಕೊಪ್ಪ, ಜಬ್ಬಾರ ನಿಪ್ಪಾಣಿ, ರಫೀಕ ಶಿರಹಟ್ಟಿ, ಇರ್ಷಾದ ಬಿಸ್ತಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.