ADVERTISEMENT

ಶುಲ್ಕ ರಿಯಾಯಿತಿ ಸಮಸ್ಯೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 5:35 IST
Last Updated 19 ಅಕ್ಟೋಬರ್ 2012, 5:35 IST

ಧಾರವಾಡ:  ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳಿಗೆ ಇದುವರೆಗೆ ನೀಡುತ್ತಿದ್ದ ಶುಲ್ಕಗಳ ರಿಯಾಯಿತಿಗೆ ಸಂಬಂಧಿಸಿದಂತೆ ಈ ವರ್ಷದಿಂದ ಮಾಡಿರುವ ಬದಲಾವಣೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ `ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ~ (ಎಐಡಿಎಸ್‌ಒ), `ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ~ (ಎಐಡಿವೈಒ)  ಕಾರ್ಯಕರ್ತರು ಗುರುವಾರ ನಗರದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ (ಬಿಸಿಎಂ) ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡುವ ವಿಧಾನವನ್ನು ಬದಲಾ ಯಿಸಿದ ಸರ್ಕಾರದ ಆದೇಶವನ್ನು ರದ್ದುಗೊಳಿಸಿ, ಆದಾಯ ಪ್ರಮಾಣಪತ್ರ ನೀಡುವ ವಿದ್ಯಾರ್ಥಿಗಳಿಗೆಲ್ಲ ಶುಲ್ಕ ಪಾವತಿಯ ಸಮಯದಲ್ಲೇ ವಿನಾಯಿತಿ ನೀಡಬೇಕು ಎಂದು ಎಐಡಿಎಸ್‌ಒ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ ಬಡಿಗೇರ ಒತ್ತಾಯಿಸಿದರು.

ಎಐಡಿವೈಒ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ ಜಡಗನ್ನವರ, `ಬಿಸಿಎಂ ಇಲಾಖೆಗೆ ಅವಶ್ಯಕತೆಯಿರುವಷ್ಟು ಅನುದಾನ ಲಭ್ಯವಿಲ್ಲದಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣದ ವೆಚ್ಚವನ್ನು ಭರಿಸುವುದು ಜನತಾಂತ್ರಿಕ ಸರ್ಕಾರದ ಮೊದಲ ಆದ್ಯತೆಯಾಗಬೇಕು. ರಾಜ್ಯದಲ್ಲಿ ಬರದಿಂದ ಬಹುಪಾಲು ರೈತರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಡವಿದ್ಯಾರ್ಥಿಗಳಿಗೆ ಶುಲ್ಕವನ್ನೇ ಮನ್ನಾ ಮಾಡಬೇಕಾದ ಸರ್ಕಾರ ಈ ರೀತಿ ಸುಲಿಗೆ ಮಾಡುತ್ತಿರುವುದು ಅಕ್ಷಮ್ಯ~ ಎಂದು ಹರಿಹಾಯ್ದರು.

ಗುಲ್ಬರ್ಗದಲ್ಲಿ ಸಚಿವ ಸಂಪುಟದ ಸಭೆ ನಡೆಯುವ ವೇಳೆ ಪ್ರತಿಭಟನೆ ನಡೆಸಿದ 800 ವಿದ್ಯಾರ್ಥಿಗಳನ್ನು ಚದುರಿಸಿ, 15 ಜನ ಎಐಡಿಎಸ್‌ಒ, ಎಐಡಿವೈಒ ನಾಯಕರನ್ನು ಬಂಧಿಸಿದ ಘಟನೆಯನ್ನು ಖಂಡಿಸಿದ ಮುಖಂಡರು, ಬಂಧಿತರನ್ನು ಕೂಡಲೇ ಬೇಷರತ್ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಎಐಡಿಎಸ್‌ಒ ನಾಯಕಿ ವಿ.ದೀಪಾ, ಕಾರ್ಯಕರ್ತರಾದ ಅಕ್ಷಯ್, ಮಂಜುನಾಥ, ಸುನೀಲ್, ಅಮಿತ್, ನಾಗರಾಜ, ಎಐಡಿವೈಒ ಕಾರ್ಯಕರ್ತ ರಮೇಶ ಮತ್ತಿತರರು ಭಾಗವಹಿಸಿದ್ದರು.  ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಶರಣಬಸವ ಕಾರ್ಯಕ್ರಮ ನಿರ್ವಹಿಸಿದರು.
ನಂತರ ನಿಯೋಗವೊಂದು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಅರ್ಪಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.