ADVERTISEMENT

ಸಾಯಿಕುಮಾರ ಸಾಧುನವರಗೆ 2ನೇ ರ‍್ಯಾಂಕ್‌

ಸಿಇಟಿ ಫಲಿತಾಂಶ: ಕೃಷಿ ವಿಭಾಗದಲ್ಲಿ ಚೇತನ ಕಾಲೇಜು ವಿದ್ಯಾರ್ಥಿಯ ಸಾಧನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 5:29 IST
Last Updated 2 ಜೂನ್ 2018, 5:29 IST
ಸಿಇಟಿ ಪರೀಕ್ಷೆಯಲ್ಲಿ ರ‍್ಯಾಂಕ್‌ ಬಂದಿರುವ ಸಾಯಿಕುಮಾರಗೆ ತಾಯಿ ಸುಮಿತ್ರಾ ಹಾಗೂ ತಂದೆ ರಾಜಶೇಖರ ಸಿಹಿ ತಿನ್ನಿಸಿದರು
ಸಿಇಟಿ ಪರೀಕ್ಷೆಯಲ್ಲಿ ರ‍್ಯಾಂಕ್‌ ಬಂದಿರುವ ಸಾಯಿಕುಮಾರಗೆ ತಾಯಿ ಸುಮಿತ್ರಾ ಹಾಗೂ ತಂದೆ ರಾಜಶೇಖರ ಸಿಹಿ ತಿನ್ನಿಸಿದರು   

ಹುಬ್ಬಳ್ಳಿ: ಬಿಎಸ್ಸಿ ಕೃಷಿಯಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್‌ ಹಾಗೂ ಎಂಜಿನಿಯರಿಂಗ್‌ ವಿಭಾಗದಲ್ಲಿ 10ನೇ ರ‍್ಯಾಂಕ್‌ ಅನ್ನು ಕಾಲೇಜಿನ ವಿದ್ಯಾರ್ಥಿ ಸಾಯಿಕುಮಾರ ಸಾಧುನವರ ಗಳಿಸಿದ್ದಾರೆ ಎಂದು ಚೇತನ ಕಾಲೇಜಿನ ಪ್ರಾಚಾರ್ಯರಾದ ಸುಜಾತಾ ದಢೂತಿ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಯುಸಿ ಪರೀಕ್ಷೆಯಲ್ಲಿಯೂ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಶ್ರೇಷ್ಠ ಸಾಧನೆ ಮಾಡಿದ್ದರು. ಈಗ ಸಿಇಟಿ ಪರೀಕ್ಷೆಯಲ್ಲಿಯೂ ಸಾಧನೆ ಮಾಡಿದ್ದಾರೆ ಎಂದರು. ಪಠ್ಯದ ಜತೆಗೆ ಸಿಇಟಿ, ಜೆಇಇ ಹಾಗೂ ನೀಟ್‌ ಪರೀಕ್ಷೆಗಳಿಗೂ ತರಬೇತಿ ನೀಡಲಾಗುತ್ತಿದೆ. ಅದರ ಪರಿಣಾಮ ವಿದ್ಯಾರ್ಥಿ ರ‍್ಯಾಂಕ್ ಗಳಿಸಿದ್ದಾರೆ ಎಂದರು.

‘ರ‍್ಯಾಂಕ್‌ ನಿರೀಕ್ಷೆಯಲ್ಲಿದ್ದೆ. ಕೃಷಿ ಹಾಗೂ ಎಂಜಿನಿಯರಿಂಗ್‌ನಲ್ಲಿ ರ‍್ಯಾಂಕ್‌ ಬಂದಿರುವುದು ಖುಷಿ ತಂದಿದೆ. ದಿನಕ್ಕೆ ಆರು ಗಂಟೆ ಓದುತ್ತಿದ್ದೆ. ಕಾಲೇಜಿನಲ್ಲಿ ನೀಡುವ ತರಬೇತಿ ಹೊರತು ಪಡಿಸಿ ಎಲ್ಲಿಯೂ ಟ್ಯೂಷನ್‌ ಹೋಗಿಲ್ಲ. ಉಪನ್ಯಾಸಕ ಮಾರ್ಗದರ್ಶನ, ತಂದೆ–ತಾಯಿಯ ಪ್ರೋತ್ಸಾಹದಿಂದ ಸಾಧನೆ ಸಾಧ್ಯವಾಗಿದೆ’ ಎಂದು ಸಾಯಿಕುಮಾರ ಸಾಧುನವರ ಹೇಳಿದರು.

ADVERTISEMENT

‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 98.24ರಷ್ಟು ಅಂಕ ಗಳಿಸಿದ್ದೆ. ಪಿಯುಸಿಯ ಪಿಸಿಎಂಬಿ ವಿಷಯಗಳಲ್ಲಿ 400ಕ್ಕೆ 399 ಅಂಕ ಗಳಿಸಿದ್ದೆ. ವೈದ್ಯಕೀಯ ಹಾಗೂ ಐಐಟಿಗೆ ಸೇರುವ ಇಚ್ಛೆ ಹೊಂದಿದ್ದೇನೆ’ ಎಂದರು. ಸಾಯಿಕುಮಾರ ತಂದೆ ಬೈಲಹೊಂಗಲ ತಾಲ್ಲೂಕಿನ ಅಮಟೂರಿನಲ್ಲಿ ಕೃಷಿಕರಾಗಿದ್ದರೆ, ತಾಯಿ ಗೃಹಿಣಿಯಾಗಿದ್ದಾರೆ. ಸಾಯಿಕುಮಾರ ತಂದೆ ರಾಜಶೇಖರ ಮಾತನಾಡಿ, ‘ಮಗ ರ‍್ಯಾಂಕ್‌ ಬಂದಿರುವುದು ಖುಷಿಯಾಗಿದೆ. ಸ್ವಾತಂತ್ರ್ಯ ಹೋರಾಟಗಾರರಾದ ಅಮಟೂರ ಬಾಳಪ್ಪನವರ ವಂಶಸ್ಥರು ನಾವು. ಮಗನ ಓದಿಗಾಗಿಯೇ ಹುಬ್ಬಳ್ಳಿಯಲ್ಲಿ ಕಾಲೇಜಿನ ಎದುರಿನಲ್ಲಿಯೇ ಮನೆ ಮಾಡಿದ್ದೆವು. ನಮ್ಮ ಶ್ರಮ ಸಾರ್ಥಕವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.