ADVERTISEMENT

ಸಾಯಿ ಮಂದಿರ ಪ್ರಕರಣ: ಯಥಾಸ್ಥಿತಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 8:24 IST
Last Updated 6 ಏಪ್ರಿಲ್ 2018, 8:24 IST

ಧಾರವಾಡ: ಹುಬ್ಬಳ್ಳಿಯ ಶ್ರೀ ಶಿರಡಿ ಸಾಯಿ ಮಂದಿರದ ಆಡಳಿತ ವ್ಯವಸ್ಥೆ, ಅರ್ಚಕರ ಬದಲಾವಣೆ ಮತ್ತು ಮಂದಿರದ ಆಸ್ತಿ ವಿವಾದ ಕುರಿತು ಮುಂದಿನ ವಿಚಾರಣಾ ದಿನಾಂಕದ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸದ್ಯದ ಆಡಳಿತ ಮಂಡಳಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಮಧ್ಯಂತರ ಆದೇಶ ನೀಡಿ, ಎದುರುಗಾರರಿಗೆ ತುರ್ತು ನೋಟಿಸ್‌ ಜಾರಿ ಮಾಡಿದೆ. ಸಾಯಿ ಮಂದಿರದ ಆಡಳಿತ ಮತ್ತು ಹಣ ದುರುಪಯೋಗವಾಗುತ್ತಿದ್ದು, ಆಡಳಿತಾಧಿಕಾರಿ ನೇಮಕ ಮಾಡುವಂತೆ ಕೋರಿ ದೀಪಕ ಜಾಧವ ಮತ್ತು ಮತ್ತೊಬ್ಬರು ದಾಖಲಿಸಿರುವ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ರಾಮಚಂದ್ರ ಹುದ್ದಾರ ಈ ಆದೇಶ ನೀಡಿದ್ದಾರೆ.

ಸಾಯಿ ಮಂದಿರದ ಸದ್ಯದ ಆಡಳಿತ ಮಂಡಳಿಯ ಅಧಿಕಾರ ದುರ್ಬಳಕೆ, ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳದಿರುವುದು ಅವ್ಯವಸ್ಥೆಗೆ ಕಾರಣವಾಗಿದೆ. ಹೀಗಾಗಿ, ಆಡಳಿತ ವ್ಯವಸ್ಥೆ ಸಮರ್ಪಕಗೊಳಿಸಲು ಹೊಸದಾಗಿ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ಕೋರಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣದಲ್ಲಿ ಎರಡು ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿದ್ದು, ಆ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ವಿಚಾರಣಾ ದಿನಾಂಕದ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆಡಳಿತ ಮಂಡಳಿಗೆ ಸೂಚಿಸಿದೆ.ಅರ್ಜಿದಾರರ ಪರ ಬಿ.ಡಿ.ಹೆಗಡೆ ದೊಡ್ಮನೆ ಮತ್ತು ಪ್ರಶಾಂತ ಅರೇಗುಳಿ ವಾದ ಮಂಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.