ADVERTISEMENT

ಸಿಎಂ ಅಧಿಕಾರ ಬಿಡಲಿ - ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 5:20 IST
Last Updated 16 ಫೆಬ್ರುವರಿ 2012, 5:20 IST

ಹುಬ್ಬಳ್ಳಿ: `ಬಜೆಟ್ ಮಂಡನೆ ನಂತರ ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ ಅಧಿಕಾರ ಬಿಟ್ಟು ಕೊಡಲಿದ್ದಾರೆ ಎಂಬ ಮಾಹಿತಿ ಇದ್ದು, ಅಧಿಕಾರದಲ್ಲಿ ಮುಂದುವರೆಯುವಂತಿದ್ದರೆ ಮಾತ್ರ ಬಜೆಟ್ ಮಂಡಿಸಲಿ. ಇಲ್ಲವಾದಲಿ ಮೊದಲೇ ಅಧಿಕಾರ ತ್ಯಜಿಸಲಿ~ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಮದುರ್ಗಕ್ಕೆ ತೆರಳುವ ಮಾರ್ಗದಲ್ಲಿ ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಬಜೆಟ್ ನಂತರ ಅಧಿಕಾರ ಬಿಟ್ಟುಕೊಡುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅವರೊಂದಿಗೆ ಸದಾ ನಂದ ಗೌಡ ರಾಜಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಆರ್‌ಎಸ್‌ಎಸ್ ನೇತೃತ್ವದಲ್ಲಿ ಇಬ್ಬರ ನಡುವೆ ಒಪ್ಪಂದವಾಗಿದೆ ಎಂಬ ಮಾಹಿತಿ ಇದೆ. ಇದು ನಿಜವಾಗಿದ್ದಲ್ಲಿ ಅದು ರಾಜ್ಯದ ಜನತೆಗೆ ಬಿಜೆಪಿ ಮಾಡುವ ಮೋಸ~ ಎಂದರು.

ಸದಾನಂದಗೌಡರು ಅಂತಹ ಮನಸ್ಸು ಹೊಂದಿದ್ದರೆ ಬಜೆಟ್‌ಗೆ ಮೊದಲೇ ಅಧಿಕಾರ ಬಿಟ್ಟುಕೊಟ್ಟು ಯಡಿಯೂರಪ್ಪ ಅವರಿಂದಲೇ ಬಜೆಟ್ ಮಂಡಿಸಲು ಮುಂದಾಗಲಿ ಎಂದು ಒತ್ತಾಯಿಸಿದರು.

`ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಕನಕಪುರದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿರುವುದಕ್ಕೆ ಮತ್ತು ಬಳ್ಳಾರಿಯಲ್ಲಿ ಮೈಸೂರು ಮಿನರಲ್ಸ್ ಸಂಸ್ಥೆಯಿಂದ ಅದಿರು ಕಳವು ಮಾಡಿರುವುದಕ್ಕೆ ತಮ್ಮ ಬಳಿ ದಾಖಲೆಗಳಿದ್ದು ಸೂಕ್ತ ಕಾಲದಲ್ಲಿ ಬಿಡುಗಡೆ ಮಾಡುತ್ತೇನೆ~ ಎಂದರು.

ರೈತರು ಹಾಗೂ ಜನಸಾಮಾನ್ಯರ ಹಿತಾಸಕ್ತಿಯ ಕಾಳಜಿ ಇರುವ ಯಾವುದೇ ಸಣ್ಣ ಪಕ್ಷಗಳ ಜೊತೆ ಮುಂದಿನ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಜೆಡಿಎಸ್ ಚಿಂತನೆ ನಡೆಸಿದೆ ಎಂದರು. ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ತಮ್ಮ ವಿರುದ್ಧ ಬಂದಿರುವ ಆರೋಪಗಳ ಬಗ್ಗೆ ಸಿಬಿಐ ತನಿಖೆ ಸೇರಿದಂತೆ ಯಾವುದೇ ರೀತಿಯ ತನಿಖೆಗೂ ತಾವು ಸಿದ್ಧ   ಎಂದರು. ಏಪ್ರಿಲ್ ನಂತರ ತಾವು ಉತ್ತರ ಕರ್ನಾಟಕ ಭಾಗದಲ್ಲಿ ಎರಡು ತಿಂಗಳು ಪ್ರವಾಸ ಮಾಡಲಿದ್ದು, ಗ್ರಾಮ ವಾಸ್ತವ್ಯದ ಮೂಲಕ ಗ್ರಾಮೀಣ ಜನರೊಂದಿಗೆ ನೇರವಾಗಿ ಸಂವಾದ ನಡೆಸುವುದಾಗಿ ಹೇಳಿದರು.

ಮಾರ್ಚ್ 2ರಿಂದ ಗುಲ್ಬರ್ಗಾ, ಯಾದಗಿರಿ, ಬೀದರ್, ರಾಯಚೂರು, ಕುಷ್ಟಗಿ, ಬಳ್ಳಾರಿ, ಗದಗ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ ಸಮಾವೇಶ ನಡೆಸಲಾಗುವುದು. ಮಾರ್ಚ್ ಅಂತ್ಯದ ವೇಳೆಗೆ ಬೆಳಗಾವಿ, ಬಿಜಾಪುರ, ಬಾಗಲಕೋಟೆ ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುವುದು.  22ರಿಂದ ಪಕ್ಷದ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಬೀದರ್‌ನಿಂದ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ ಎಂದರು.

ಕಳೆದ ಬಾರಿ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಿ ಸುವರ್ಣಭೂಮಿ ಯೋಜನೆ ಯಡಿ 10 ಲಕ್ಷ ಕುಟುಂಬಗಳಿಗೆ ತಲಾ 10 ಸಾವಿರದಂತೆ ನೀಡಲು 1 ಸಾವಿರ ಕೋಟಿ ನೀಡುವುದಾಗಿ ಹೇಳಿ ಕೇವಲ 150 ಕೋಟಿ ಕೊಡಲಾಗಿದೆ ಎಂದರು.

ಜೆಡಿಎಸ್ ಬೆಂಬಲ: ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ 63 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸಿ ದರೂ ಸರ್ಕಾರ ಸ್ಪಂದಿಸದಿರುವುದು ನಾಚಿಕೆಗೇಡಿನ ಸಂಗತಿ. ಮಾಜಿ ಸಚಿವ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಧಾರವಾಡದಿಂದ ಬೆಂಗಳೂರಿಗೆ ಶಿಕ್ಷಕರು ಹಮ್ಮಿ ಕೊಂಡಿರುವ ಪಾದಯಾತ್ರೆಯನ್ನು ಜೆಡಿಎಸ್ ಬೆಂಬಲಿಸಲಿದೆ ಎಂದು ಕುಮಾರಸ್ವಾಮಿ  ತಿಳಿಸಿದರು.
ಮಾಜಿ ಸಚಿವರಾದ ಪಿ.ಸಿ.ಸಿದ್ದನಗೌಡ್ರು, ಅಲ್ಕೋಡ್ ಹನುಮಂತಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.