ಹುಬ್ಬಳ್ಳಿ: ಲಕ್ಷಾಂತರ ಭಕ್ತರ ಹರ್ಷೋದ್ಗಾರದ ನಡುವೆ ಸಿದ್ಧಾರೂಢ ಸ್ವಾಮಿಯ 112ನೇ ರಥೋತ್ಸವ ಶುಕ್ರವಾರ ಸಂಭ್ರಮದಿಂದ ನಡೆಯಿತು.
ಸಿದ್ಧಾರೂಢರ ತೇರು ಪ್ರಮುಖ ಬೀದಿಯಲ್ಲಿ ಸಾಗುತ್ತಿದ್ದಂತೆಯೇ, ಭಕ್ತಾದಿಗಳು ಉತ್ತತ್ತಿ, ಬಾಳೆಹಣ್ಣು, ನಿಂಬೆಹಣ್ಣು ಎಸೆದು ಸಂಭ್ರಮಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸಾಗರ ರಥೋತ್ಸವವನ್ನು ಕಣ್ಣುತುಂಬಿಕೊಂಡಿತು.
ಡೊಳ್ಳು, ಬ್ಯಾಂಜೋ, ಜಗ್ಗಲಿಗೆ ಬಾರಿಸುತ್ತಾ ಸಾಗಿದ ಯುವಕರು ಜಾತ್ರೆಯ ಸಂಭ್ರಮವನ್ನು ದುಪ್ಪಟ್ಟುಗೊಳಿಸಿದರು. ತೇರು ಸಾಗಿದ ಕಡೆಗೆಲ್ಲಾ ‘ಓಂ ನಮಃ ಶಿವಾಯ’ ಉದ್ಗಾರ ಭಕ್ತಿಲೋಕವನ್ನೇ ಸೃಷ್ಟಿಸಿತು. ಎತ್ತಿನ ಗಾಡಿ, ಟೆಂಪೊ, ಟ್ರ್ಯಾಕ್ಟರ್ ಮೂಲಕವಲ್ಲದೆ, ಪಾದಯಾತ್ರೆ ಮೂಲಕವೂ ಲಕ್ಷಾಂತರ ಭಕ್ತರು ಜಾತ್ರೆಗೆ ಬಂದಿದ್ದರು.
ಗುರುವಾರ ಶಿವರಾತ್ರಿಯ ಪ್ರಯುಕ್ತ ವಿಶೇಷ ಕಳೆ ಪಡೆದಿದ್ದ ಶ್ರೀಮಠ, ಶುಕ್ರವಾರವೂ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಬೆಳಿಗ್ಗೆ 7.30ರಿಂದ 9.30ರವರೆಗೆ ಗೋಪಾಲ ಭಟ್ ಜೋಶಿ ಅವರಿಂದ ಸಿದ್ಧಾರೂಢ ಭಾರತಿ ಕಲ್ಪದ್ರುಮ ಪುರಾಣ ಪಠಣ ನಡೆಯಿತು.
ನಂತರ ‘ಜೀವನ್ಮುಕ್ತಿ’ ವಿಷಯವಾಗಿ ಹುಬ್ಬಳ್ಳಿಯ ಶಾಂತಾಶ್ರಮದ ಶಿವಪುತ್ರ ಸ್ವಾಮೀಜಿ, ಮಹಾಲಿಂಗಪುರದ ಶ್ರೀ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ವೇದಾಂತ ಉಪನ್ಯಾಸ ನೀಡಿದರು. ಕಾಡರಕೊಪ್ಪದ ಸರಸ್ವತಿ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ನಂತರ, ಹಳೆ ಹುಬ್ಬಳ್ಳಿಯ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಪಲ್ಲಕ್ಕಿ ಉತ್ಸವ ನೆರವೇರಿತು. ಸಂಜೆ 6ಗಂಟೆಗೆ ಶ್ರೀಮಠದ ಆಡಳಿತಾಧಿಕಾರಿ ಎಂ. ರಮೇಶರಾವ್ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.