ಧಾರವಾಡ: ಹಳೆಯ ಪಿಂಚಣಿ ಸೌಲಭ್ಯ ಯಥಾವತ್ ಜಾರಿಗೆ ಆಗ್ರಹಿಸಿ ರಾಜ್ಯ ಅನುದಾನಿತ ಶಾಲಾ, ಕಾಲೇಜು ಪಿಂಚಣಿ ವಂಚಿತ ನೌಕರರ ಸಂಘದ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
‘ನೂತನ ಪಿಂಚಣಿ ಯೋಜನೆಯಲ್ಲಿರುವ ಗೊಂದಲ ನಿವಾರಿಸಬೇಕು. ಈಗ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಹಳೆಯ ಪಿಂಚಣಿ ನೀಡಬೇಕು’ ಎಂದು ಆಗ್ರಹಿಸಿದರು.
‘2006ರ ಏಪ್ರಿಲ್ 1ರ ನಂತರ ಅನುದಾನಕ್ಕೆ ಒಳಪಟ್ಟ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಳೆಯ ಪಿಂಚಣಿಯನ್ನು ರದ್ದು ಮಾಡಿರುವುದನ್ನು ಖಂಡಿಸಿದರು.
‘11 ವರ್ಷ ಕಳೆದರೂ ನೌಕರರ ಪರವಾಗಿ ಪಿಂಚಣಿಗೆ ಶೇ 10ರಷ್ಟು ವಂತಿಗೆಯನ್ನು ರಾಜ್ಯ ಸರ್ಕಾರ ನೀಡಿಲ್ಲ’ ಎಂದು ಪ್ರತಿಭಟನಾಕಾರರು ಆರೋಪಿಸಿದರು. ‘ಸರ್ಕಾರ ಕೂಡಲೇ ನೌಕರರು ಸೇವೆಗೆ ಸೇರಿದ ದಿನಾಂಕ ಪರಿಗಣಿಸಿ ಹಳೆಯ ಪಿಂಚಣಿ ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.
ಸಂಘದ ಸದಸ್ಯರು ಇಲ್ಲಿನ ಕಲಾಭವನದಿಂದ ಕೋರ್ಟ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಜಿ. ಹನುಮಂತಪ್ಪ, ಪ್ರಮುಖರಾದ ರಿಯಾಜ್ ಅಹ್ಮದ್ ಸನದಿ, ಮೊಹ್ಮದ್ ಖಾದರಿ ಬಾಗೇವಾಡಿ, ಶಮಶಾದಬಿ ಮುಲ್ಲಾ, ಆನಂದ ಕುಲಕರ್ಣಿ, ಆರ್.ಎಂ.ಕುಬೇರಪ್ಪ, ಎಸ್.ಎಲ್.ಜಾಧವ, ಮುತ್ತುರಾಜ ಮತ್ತಿಕೊಪ್ಪ, ಸೋಮಪ್ಪ ಮುದೆಣ್ಣವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.