ADVERTISEMENT

‘ಅನಂತಮೂರ್ತಿ ಕಾಂಗ್ರೆಸ್‌ ತಾರಾ ಪ್ರಚಾರಕರಾಗಲಿ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 8:29 IST
Last Updated 26 ಸೆಪ್ಟೆಂಬರ್ 2013, 8:29 IST

ಧಾರವಾಡ: ‘ಗುಜರಾತ್‌ ಮುಖ್ಯ­ಮಂತ್ರಿ ನರೇಂದ್ರ ಮೋದಿ  ವಿರುದ್ಧ ದಿನ­ಕ್ಕೊಂದು ಹೇಳಿಕೆ ನೀಡುತ್ತಿರುವ ಯು.ಆರ್‌.ಅನಂತಮೂರ್ತಿ ಕಾಂಗ್ರೆಸ್‌­ನ ತಾರಾ ಪ್ರಚಾರಕರಾಗಲಿ. ಅದರಿಂದ ಅವರಿಗೆ ಇನ್ನೊಂದು ಉನ್ನತ ಪ್ರಶಸ್ತಿ­ಯೂ ಸಿಗಬಹುದು’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಬುಧವಾರ ಇಲ್ಲಿ ಲೇವಡಿ ಮಾಡಿದರು.

‘ಅನಂತಮೂರ್ತಿ ಇಂದಿರಾ ಕಾಂಗ್ರೆಸ್‌ ಹಾಗೂ ರಾಹುಲ್‌ ಕಾಂಗ್ರೆಸ್‌ ಎರಡನ್ನೂ ಟೀಕಿಸುತ್ತಾರೆ. ಆದರೆ ಸಿದ್ದರಾಮಯ್ಯ ಕಾಂಗ್ರೆಸ್ಸನ್ನು ಮಾತ್ರ ಟೀಕಿಸದೇ ಅದರ ಪರ ಇದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಅವರು ದಿನ­ಕ್ಕೊಂದು ಹೇಳಿಕೆ ನೀಡುತ್ತಿದ್ದು, ಅವರ ಮಾನಸಿಕ ಸ್ಥಿಮಿತ ಸರಿ ಇದೆಯೋ ಇಲ್ಲವೋ ಎಂಬುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದರು.

ತಲೆ ಮಸಾಜ್‌ ಮಾಡಿಕೊಳ್ಳಲಿ: ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದ ದಣಿವನ್ನು ನಿವಾರಿಸಲು ಕಾಲುಗಳ ಮಸಾಜ್‌ ಮಾಡಿಸಿಕೊಂಡಿದ್ದರು. ಇದೀಗ ಅವರ ಸಂಪುಟದ ಸಚಿವ ಸಂತೋಷ್‌ ಲಾಡ್‌ ಅವರೇ ಅಕ್ರಮ ಎಸಗಿದ ಗಣಿ ಕಂಪೆನಿಯ ನಿರ್ದೇಶಕರಾಗಿದ್ದಾರೆ.

ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿದರೂ ಲಾಡ್‌ ಅವರಿಂದ ಇನ್ನೂ ರಾಜೀನಾಮೆ ಪಡೆಯುತ್ತಿಲ್ಲ. ಆದ್ದರಿಂದ ಸಿದ್ದರಾಮಯ್ಯ ತಮ್ಮ ತಲೆಯನ್ನೂ ಮಸಾಜ್‌ ಮಾಡಿಸಿಕೊಂಡರೆ ಕಳಂಕಿತರನ್ನು ಸಂಪುಟದಿಂದ ಕೈಬಿಡುವ ಯೋಚನೆ ಹೊಳೆಯಬಹುದು ಎಂದು ವ್ಯಂಗ್ಯವಾಡಿದರು.

‘ಬಿ.ಎಸ್‌.ಯಡಿ­ಯೂರಪ್ಪ ಅವರನ್ನು ಬಿಜೆಪಿಗೆ ತರುವ ಸಂಬಂಧ ಪಕ್ಷದ ಕೇಂದ್ರ ನಾಯಕರ ಸೂಚನೆ ಮೇರೆಗೆ ನಡೆದುಕೊಳ್ಳಲಾಗು­ತ್ತಿದೆ. ಪಕ್ಷದ ಶೇ 51ರಷ್ಟು ಕಾರ್ಯ­ಕರ್ತರು, ಮುಖಂಡರು ಒಪ್ಪಿದರೆ ಮಾತ್ರ ಅವರು ಸೇರ್ಪಡೆಯಾಗ­ಬಹುದು. ಇಲ್ಲದಿದ್ದರೆ ಇಲ್ಲ. ಪ್ರಜಾಸತ್ತಾತ್ಮಕ ರೀತಿಯಲ್ಲಿಯೇ ನಾಯಕರು, ಕಾರ್ಯಕರ್ತರ ಅಭಿ­ಪ್ರಾಯ ಕೇಳಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.