ADVERTISEMENT

ಪರಿಷ್ಕರಣೆ ನೆಪದಲ್ಲಿ 1.40 ಲಕ್ಷ ಮತದಾರರು ಪಟ್ಟಿಯಿಂದ ಹೊರಕ್ಕೆ: ನೀರಲಕೇರಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 13:44 IST
Last Updated 23 ನವೆಂಬರ್ 2022, 13:44 IST

ಹುಬ್ಬಳ್ಳಿ: ‘ಬೆಂಗಳೂರು ಮಾದರಿಯಲ್ಲಿ ಧಾರವಾಡ ಜಿಲ್ಲೆಯಲ್ಲೂ ಖಾಸಗಿಯವರಿಂದ ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸಿ, ಸುಮಾರು 1.40 ಲಕ್ಷ ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಸದ್ಯ ಪ್ರಕಟವಾಗಿರುವ ಪಟ್ಟಿಯನ್ನು ಮರು ಪರಿಶೀಲನೆಗೆ ಒಳಪಡಿಸಬೇಕು. ಚುನಾವಣಾ ಆಯೋಗದ ಮೇಲ್ವಿಚಾರಣೆಯಲ್ಲಿ ಈ ಪ್ರಕ್ರಿಯೆ ನಡೆಯಬೇಕು’ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪಿ.ಎಚ್. ನೀರಲಕೇರಿ ಆಗ್ರಹಿಸಿದರು.

‘ಜಿಲ್ಲೆಯ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ 18 ಸಾವಿರ ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ 65 ಮಂದಿಯ ಹೆಸರನ್ನು ಸಕಾರಣವಿಲ್ಲದೆ ಕೈಬಿಡಲಾಗಿದೆ. ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರ ನೇತೃತ್ವದಲ್ಲಿ ಆ ಪಕ್ಷದ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದಕ್ಕಾಗಿ, ವೋಟರ್ ಇಂಟರ‍್ಯಾಕ್ಷನ್ ಆ್ಯಂಡ್ ಪ್ರೊಫೈಲಿಂಗ್ ಎಂಬ ಆ್ಯಪ್ ಬಳಸಲಾಗುತ್ತಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಕ್ಷೇತ್ರದಲ್ಲಿ ಹೊರರಾಜ್ಯಗಳ 23 ಸಾವಿರ ಮತದಾರರಿದ್ದರು. ಈ ಸಲದ ಪಟ್ಟಿಯಲ್ಲೂ ಅವರ ಹೆಸರಿದೆ. ಇದೇ ರೀತಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ತಮಗೆ ಬೇಕಾದವರನ್ನು ಪಟ್ಟಿಗೆ ಸೇರಿಸುವ, ಬೇಡದವರನ್ನು ಕೈಬಿಡುವ ಕೆಲಸವನ್ನು ಖಾಸಗಿ ಏಜೆಂಟ್‌ಗಳ ಮೂಲಕ ಮಾಡಲಾಗುತ್ತಿದೆ. ಇದೆಲ್ಲದರ ಹಿಂದೆ ಬಿಜೆಪಿಯ ಐ.ಟಿ ಸೆಲ್‌ ಕೆಲಸ ಮಾಡುತ್ತಿದೆ. ಚುನಾವಣೆಯಲ್ಲಿ ಸೋಲಿನ ಭಯದಿಂದಾಗಿ ಬಿಜೆಪಿ ಈ ಕೃತ್ಯಕ್ಕೆ ಇಳಿದಿದೆ’ ಎಂದು ದೂರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.