ಧಾರವಾಡ: ‘ಅಂಬಿಗರ ಚೌಡಯ್ಯ ಪೀಠಕ್ಕೆ ₹100 ಕೋಟಿ ನೀಡಲು ಸರ್ಕಾರ ಮುಂದಾಗಿದ್ದು, ಈಗಾಗಲೇ ₹ 32 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಸಚಿವ ವಿನಯ ಕುಲಕರ್ಣಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮಾಜಕ್ಕೆ ಅಂಬಿಗರ ಚೌಡಯ್ಯ ಅವರ ಕೊಡುಗೆ ಅನನ್ಯವಾದದ್ದು. ಅವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಂಕು–ಡೊಂಕುಗಳನ್ನು ತಿದ್ದಲು ಮುಂದಾಗಿದ್ದರು. ಅವರ ತತ್ವಾದರ್ಶ ಹಾಗೂಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
‘ಸಮಾಜದಲ್ಲಿನ ಅಸ್ಪೃಶ್ಯತೆ ನಿವಾರಣೆಗೆ ಸಾಕಷ್ಟು ಶ್ರಮಿಸಿದ್ದಾರೆ. ಆಗಿನ ಕಾಲದಲ್ಲಿದ್ದ ಅನಾಚಾರ, ಆಪಾದನೆ, ಟೀಕೆಗಳನ್ನು ಮೆಟ್ಟಿ ನಿಂತವರು. ಅವರ ವಚನಗಳಲ್ಲಿ ನೇರ ನುಡಿ ಹಾಗೂ ದಿಟ್ಟ ನಿರ್ಧಾರದ ಅಂಶಗಳನ್ನು ಕಾಣಬಹುದಾಗಿದೆ. ಹಕ್ಕುಗಳನ್ನು ಪಡೆದುಕೊಳ್ಳಲು ಸಮಾಜದವರು ಮುಂದಾಗಬೇಕಿದೆ’ ಎಂದು ತಿಳಿಸಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ‘ಜಯಂತಿಗಳ ಆಚರಣೆಯಿಂದ ಅವರ ಸಾಧನೆಗಳನ್ನು ನೆನಪಿಸಿಕೊಳ್ಳಬಹುದಾಗಿದೆ. ಅಂಬಿಗರ ಚೌಡಯ್ಯ ಅವರು ಸಮಾಜಕ್ಕೆ ಹತ್ತಿರವಾದ ವಚನಗಳನ್ನು ರಚಿಸಿದ್ದಾರೆ. ಇಂದಿಗೂ ಅವರ ತತ್ವಗಳು, ಸಂದೇಶಗಳು ಪ್ರಚಲಿತವಾಗಿವೆ’ ಎಂದರು.
ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರ ಅವರು, ನಿಜಶರಣ ಅಂಬಿಗರ ಚೌಡಯ್ಯನವರ ಸಾಮಾಜಿಕ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಸಚಿವ ವಿನಯ ಕುಲಕರ್ಣಿ, ಅಂಬಿಗರ ಚೌಡಯ್ಯ ಮಿನಿ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಮಾತನಾಡಿದರು. ಸಮಾಜದ ಮುಖಂಡರಾದ ಮಂಜುನಾಥ ಭೀಮಕ್ಕನವರ, ಮಾರುತಿ ಕಬ್ಬೇರ, ಗುರಪ್ಪ ಜಡ್ಡಿ, ಯಲ್ಲಪ್ಪ ಸುಣಗಾರ, ಮನೋಜಕುಮಾರ ಕರ್ಜಗಿ, ಅರವಿಂದ ಏಗನಗೌಡರ, ಮಹಾದೇವಪ್ಪ ಸುಣಗಾರ, ಹನುಮಂತಪ್ಪ ಇಟಗಿ, ವಿಮಾ ಬಳ್ಳಾರಿ, ಶಿವಾನಂದ ಜಾಲರ, ಹನುಮಂತಪ್ಪ ಅಂಬಿಗೇರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.