ADVERTISEMENT

ಅಕ್ಕಮಹಾದೇವಿ ವಿಶ್ವದ ಅಪರೂಪದ ಮಹಿಳಾ ಸಂತೆ

ಅಕ್ಕಮಹಾದೇವಿ ಜಾತ್ರಾ ಮಹೋತ್ಸವದಲ್ಲಿ ಸಿದ್ದೇಶ್ವರಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 11:25 IST
Last Updated 26 ಜನವರಿ 2018, 11:25 IST

ಕಮಲಾಪುರ: ‘ವೈರಾಗ್ಯದ ಉತ್ತುಂಗ ಸ್ಥಿತಿಯಲ್ಲಿ ಬಾಳಿ, ತನ್ನ ಅನುಭಾವದ ಮೂಲಕ ಕನ್ನಡ ಸಾಹಿತ್ಯಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ ಶಿವ ಶರಣೆ ಅಕ್ಕಮಹಾದೇವಿ ವಿಶ್ವದ ಅಪರೂಪದ ಮಹಿಳಾ ಸಂತೆ’ ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರಶ್ರೀ ನುಡಿದರು.

ಸಮೀಪದ ಮಹಾಗಾಂವ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಅಕ್ಕಮಹಾದೇವಿ ಜಾತ್ರೆ ಹಾಗೂ ಮಾಜಿ ಶಾಸಕ, ದಿವಂಗತ ಚಂದ್ರಶೇಖರ ಪಾಟೀಲರ ಜನ್ಮ ಶತಾಬ್ದಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಲೌಕಿಕ ಸುಖ ಭೋಗಗಳನ್ನು ತ್ಯಜಿಸಿ, ಅಲೌಕಿಕ ಮಲ್ಲಿಕಾರ್ಜುನನನ್ನೆ ತನ್ನ ಗಂಡನನ್ನಾಗಿ ಮಾಡಿಕೊಂಡವಳು ಅಕ್ಕಮಹಾದೇವಿ. ಕಾಮದ ಸ್ಪರ್ಶವಿಲ್ಲ, ಕ್ರೋದದ ಕಾವಿಲ್ಲ, ಬೇಕು, ಬೇಡ ಎನ್ನುವ ಭಾವವಿಲ್ಲದೆ ಭಕ್ತಿ ರಸಾಮೃತ ತುಂಬಿಕೊಂಡು ಸದಾ ಪ್ರಶಾಂತ ಚಿತ್ತಳಾಗಿ ತನ್ನ ಅನುಭಾವವನ್ನು ಜಗತ್ತಿಗೆ
ಉಣ ಬಡಿಸಿದ್ದಾಳೆ. ಜಾತ್ರೆ ಮಾಡುವುದೆಂದರೆ ಅವರ ವಾಣಿ, ವಚನ, ಆದರ್ಶಗಳನ್ನು ನೆನೆಸಿಕೊಳ್ಳುವುದಾಗಬೇಕು’ ಎಂದರು.

ADVERTISEMENT

‘ಸ್ವಾತಂತ್ರ್ಯ ಹೋರಾಟಗಾರರು, ಮುತ್ಸದ್ಧಿ ರಾಜಕಾರಣಿಗಳು, ಕವಿಗಳು, ಧಾರ್ಮಿಕ ಚಿಂತಕರು ಬಾಳಿ ಬದುಕಿದ, ಶಿವಶರಣರು ಸುಳಿದಾಡಿದ ಈ ಗ್ರಾಮ ಸುಮಧುರ ಘಟನೆ, ಸ್ಮರಣೆಯ ವಿಚಾರಗಳನ್ನು ಹೊಂದಿರುವಂಥದ್ದು. ಇದರ ಅಳಿವನ್ನು ತಪ್ಪಿಸಿ, ಉಳಿವಿಗಾಗಿ ಪ್ರಯತ್ನಿಸುವುದು ನಮ್ಮ ಕರ್ತವ್ಯ. ಕಲೆ, ವಿದ್ಯೆ, ಉತ್ಪಾದನೆ ಗ್ರಾಮದಲ್ಲಿರಬೇಕು. ಶಾಂತಿ ಕದಡುವ ನಡೆ, ನುಡಿ, ವಿಚಾರಗಳಿಗೆ ಎಡೆಮಾಡಿಕೊಡದೆ, ಸಖಿ, ಸಖ್ಯ, ಆತ್ಮೀಯ ಭಾವನೆಯಿಂದ ಜನ ಬಾಳಬೇಕು’ ಎಂದು ತಿಳಿಹೇಳಿದರು.

**

ಮಹಾಲಿಂಗ ಪುಣ್ಯಕ್ಷೇತ್ರವಾಗಲಿ

ಉಡತಡಿಯಿಂದ ಬಸವ ಕಲ್ಯಾಣಕ್ಕೆ ತೆರಳುವ ಸಂದರ್ಭದಲ್ಲಿ ಅಕ್ಕಮಹಾದೇವಿ ಈ ಸ್ಥಾನದಲ್ಲಿ ತಂಗಿ ಪೂಜೆಗೈದಿರುವುದಾಗಿ ಪ್ರತೀತಿ ಇದೆ. ಇದಕ್ಕೆ ಕುರುಹುಗಳಿವೆ. ಸೂಕ್ತ ಅಧ್ಯಯನ ನಡೆಸುವ ಮೂಲಕ ಸರ್ಕಾರ ಈ ಸ್ಥಳವನ್ನು ಅಭಿವೃದ್ಧಿಪಡಿಸಬೇಕು. ಅಕ್ಕಮಹಾದೇವಿ ಮೂಲಕ ಮಾತ್ರ ಮಹಾಗಾಂವದ ಹೆಸರು ವಿಶ್ವದಾದ್ಯಂತ ಹರಡಲು ಸಾಧ್ಯ.

‘ಬೆಣ್ಣೆತೋರಾ, ಗಂಡೋರಿ ನಾಲಾ ಎರಡು ನದಿಗಳ ಸಂಗಮ ಸ್ಥಾನ ಇದಾಗಿದ್ದು, ಈ ಮುಂಚೆ ಇಲ್ಲಿ ಅದ್ಧೂರಿಯಾಗಿ ಜಾತ್ರೆ, ಸಭೆ, ಸಮಾರಂಭ ಗಳು ಜರುಗುತ್ತಿದ್ದವು. ಶರಣರ ಸ್ಪರ್ಶದೊಂದಿಗೆ, ದಿವಂಗತ ಚಂದ್ರಶೇಖರ ಪಾಟೀಲ, ಅಪ್ಪರಾವ ಪಾಟೀಲರಂತಹ ಅಪ್ಪಟ ದೇಶಪ್ರೇಮಿಗಳಿಗೆ ಜನ್ಮಕೊಟ್ಟ ಗ್ರಾಮ ಇದಾಗಿದ್ದು, ಗ್ರಾಮದ ರಾಜಕೀಯ ಮುಖಂಡರು, ಯುವಕರು ಇದನ್ನು ಪುಣ್ಯ ಕ್ಷೇತ್ರವನ್ನಾಗಿಸಲು ಶ್ರಮಿಸಬೇಕು’ ಎಂದು ವೇದಿಕೆ ಮೇಲಿದ್ದ ಎಲ್ಲ ಸ್ವಾಮೀಜಿಗಳು, ಗಣ್ಯರು ಒತ್ತಾಯಿಸಿದರು.

ಇಂಗಳೇಶ್ವರ ಸ್ವಾಮೀಜಿ, ಕಲ್ಮಠದ ಸಿದ್ಧಲಿಂಗ ಸ್ವಾಮೀಜಿ, ಹರಸೂರನ ಕರಿಬಸವೇಶ್ವರ ಸ್ವಾಮೀಜಿ, ಕಳ್ಳಿಮಠದ ಗುರುಲಿಂಗ ಶಿವಾಚಾರ್ಯ, ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ, ಶಾಸಕ ಅಮರನಾಥ ಪಾಟೀಲ, ಜಿ.ಪಂ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ, ವಕೀಲ ಶಿವಕುಮಾರ ಪಸಾರ, ಹಿರಿಯ ಮುಖಂಡ ಶಿವರಾಜ ಪಾಟೀಲ, ನಿವೃತ್ತ ಶಿಕ್ಷಕ ವೀರಭದ್ರಪ್ಪ ಪಸಾರ, ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಶಾಮ ನಾಟೀಕಾರ, ಗರು ಮಾಟೂರ, ಮುರಘೇಂದ್ರ ವೀರಶೆಟ್ಟಿ, ಜಲಂದರ ಮಾಸ್ಟರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.