ADVERTISEMENT

ಹಣ ದೋಚಿದ ಆರೋಪ; ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 1:34 IST
Last Updated 13 ಫೆಬ್ರುವರಿ 2021, 1:34 IST

ಹುಬ್ಬಳ್ಳಿ: ಹಣ ದೋಚಿದ ಆರೋಪದ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬ್ಯಾಂಕ್‌ಗಳಿಗೆ ಹಣ ಸಾಗಿಸುವಾಗ ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮೂಲದ ಇಬ್ಬರನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದು, ₹1.4 ಲಕ್ಷ ನಗದು ಹಾಗೂ ಮೋಟಾರು ಬೈಕ್‌ ವಶಪಡಿಸಿಕೊಂಡಿದ್ದಾರೆ. ಬಾಬು ಆರ್‌. ನಾಯ್ಡು ಮತ್ತು ಶಂಕರ ಕೆ. ರಾಜು ಬಂಧಿತರು. ಇವರು ಚೆನ್ನೈನಲ್ಲಿ ವಾಸವಾಗಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇನ್ನೊಂದು ಪ್ರಕರಣದಲ್ಲಿ ಕಸಬಾ ಠಾಣೆ ಪೊಲೀಸರು ಗಂಗಾಧರ ನಗರದ ದರ್ಶನ ಬಿಜವಾಡ ಮತ್ತು ಸಂದೀಪ ಬೆಳ್ಳಿಗಟ್ಟಿ ಎಂಬುವರನ್ನು ಬಂಧಿಸಿದ್ದು, ಇವರಿಂದ ₹35,500 ಮೌಲ್ಯದ ಮೊಬೈಲ್‌ ಫೋನ್‌, ಬೆಳ್ಳಿ ಸರ, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಲಾರಿ ಪಲ್ಟಿ: ಔಷಧಗಳನ್ನು ಸಾಗಿಸುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಶುಕ್ರವಾರ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಗಡಿ ಕ್ರಾಸ್‌ ಬಳಿ ಪಲ್ಟಿಯಾಗಿದೆ. ಲಾರಿ ಗೋವಾದಿಂದ ಬೆಂಗಳೂರಿಗೆ ಹೊರಟಿತ್ತು.

ಚಿಕಿತ್ಸೆಗೆ ಸ್ಪಂದಿಸದೆ ಸಾವು: ಹುಬ್ಬಳ್ಳಿಯಿಂದ ಹೆಬ್ಬಳ್ಳಿ ಕಡೆ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ.

ಪರಮೇಶ್ವರ ಮೊರಬದ ಮೃತಪಟ್ಟ ವ್ಯಕ್ತಿ. ಫೆ. 8 ರಂದು ರಾತ್ರಿ ಹೆಬ್ಬಳ್ಳಿ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿ ಅವರ ತಲೆಗೆ ಪೆಟ್ಟಾಗಿತ್ತು. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಚಿಕಿತ್ಸೆಗೆ ಸ್ಪಂದಿಸದೆ ಪರಮೇಶ್ವರ ಮೃತಪಟ್ಟಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಾರುಗಳ ನಡುವೆ ಡಿಕ್ಕಿ: ಧಾರವಾಡದ ಸತ್ತೂರು ಬಳಿ ಗುರುವಾರ ತಡರಾತ್ರಿ ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಕಲಬುರ್ಗಿ ವಿವೇಕಾನಂದ ಆಶ್ರಮದ ಮಹೇಶ್ವರಾನಂದ ಸ್ವಾಮೀಜಿ ಪ್ರಾಣಾಪಾಯದಿಂದ
ಪಾರಾಗಿದ್ದಾರೆ.

ಹುಬ್ಬಳ್ಳಿಯಿಂದ ಧಾರವಾಡ ಕಡೆಗೆ ಸ್ವಾಮೀಜಿ ಪ್ರಯಾಣಿಸುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಕಾರು ಚಾಲಕ ಸ್ವಾಮೀಜಿ ಇದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಅದರ ರಭಸಕ್ಕೆ ಸ್ವಾಮೀಜಿ ಕಾರು ನಜ್ಜುಗುಜ್ಜಾಗಿದೆ.ಡಿಕ್ಕಿಪಡಿಸಿದ ಕಾರಿನ ಚಾಲಕ ಪರಾರಿಯಾಗಿದ್ದಾನೆ. ಪ್ರಕರಣ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.