ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿವೆ ಎಂದು ಆರೋಪಿಸಿ, ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಹಮಾಲಿ ಕಾರ್ಮಿಕರ ಒಕ್ಕೂಟದ ಸದಸ್ಯರು ಸಿಐಟಿಯು ನೇತೃತ್ವದಲ್ಲಿ ಶುಕ್ರವಾರ ಹೊಸ ಕಾಯ್ದೆಗಳ ಪ್ರತಿಗಳನ್ನು ದಹಿಸಿ ಪ್ರತಿಭಟನೆ ನಡೆಸಿದರು.
ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ದೇಶದ ರೈತ ಸಮೂಹವು ದೆಹಲಿ ಸೇರಿದಂತೆ, ದೇಶದಾದ್ಯಂತೆ ನಡೆಯುತ್ತಿರುವ ಹೋರಾಟ ದಿನೇ ದಿನೇ ತೀವ್ರವಾಗುತ್ತಿದೆ. ರೈತರ ಕೂಗು ಆಲಿಸದ ಸರ್ಕರ ಬಂಡವಾಳಶಾಹಿಗಳ ಪರವಾಗಿರುವ ಕಾಯ್ದೆಗಳಿಗೆ ಅಂಟಿಕೊಂಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾಯ್ದೆಗಳ ವಿರುದ್ಧ ರಾಜ್ಯದಾದ್ಯಂತ ಸಂಘಟಿತ ಕಾರ್ಮಿಕರು ಪ್ರತಿ ಕಾರ್ಖಾನೆಗಳ ಎದುರು ಹಾಗೂ ಬಿಸಿಯೂಟ, ಅಂಗನವಾಡಿ, ಗ್ರಾಮ ಪಂಚಾಯಿತಿ, ಹಮಾಲಿ, ಬೀದಿ ಬದಿ, ಬೀಡಿ, ಕಟ್ಟಡ ನಿರ್ಮಾಣ ಅಸಂಘಟಿತ ಕಾರ್ಮಿಕರು ಮತ್ತು ವಿವಿಧ ಗುತ್ತಿಗೆ ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.ಹೊಸ ವರ್ಷದ ದಿನವನ್ನು ‘ಕಾರ್ಮಿಕ ಹಕ್ಕುಗಳನ್ನು ಉಳಿಸುತ್ತೇವೆ. ರೈತರ ಬದುಕನ್ನು ರಕ್ಷಿಸುತ್ತೇವೆ. ಕಾರ್ಫೋರೇಟ್ ಹಿಡಿತದಿಂದ ದೇಶವನ್ನು ಕಾಪಾಡುತ್ತೇವೆ’ ಎಂಬ ಪ್ರತಿಜ್ಞೆಯೊಂದಿಗೆ ಸ್ವಾಗತಿಸಲಾಗುತ್ತಿದೆ ಎಂದರು.
ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಒಕ್ಕೂಟದ ಅಧ್ಯಕ್ಷ ಬಸವಣ್ಣೆಪ್ಪ ನೀರಲಗಿ, ಪ್ರಧಾನ ಕಾರ್ಯದರ್ಶಿ ಗುರುಸಿದ್ದಪ್ಪ ಅಂಬಿಗೇರ, ಮುಖಂಡರಾದ ಕರಿಯಪ್ಪ ದಳವಾಯಿ, ಕರಿಯಪ್ಪ ಗಿರಿಸಾಗರ, ಹುಸೇನಸಾಬ ನದಾಫ್, ಕತಾಲಸಾಬ ಮುಲ್ಲಾ, ಮೊಹ್ಮದರಫೀಕ್ ಮುಳಗುಂದ, ಹನಮಮತ ಅಂಬಿಗೇರ, ಗಾಳೆಪ್ಪ ಮುತ್ಯಾಳ ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.