ಹುಬ್ಬಳ್ಳಿ: ಆಶಾ ಕಾರ್ಯಕರ್ತೆಯರ ಮಾಸಿಕ ಗೌರವ ಧನವನ್ನು ₹12,000ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹುಬ್ಬಳ್ಳಿ ತಾಲ್ಲೂಕು ಸಮಿತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ನಿರಂತರವಾಗಿ ಆಶಾಗಳ ಆರೋಗ್ಯ ತಪಾಸಣೆ ಮಾಡಬೇಕು. ಮಾಸ್ಕ್, ಸ್ಯಾನಿಟೈಸರ್, ಫೇಸ್ ಶೀಲ್ಡ್ ಮುಂತಾದ ರಕ್ಷಣಾ ಸಾಮಗ್ರಿ ನೀಡಬೇಕು. ಎರಡು ವರ್ಷಗಳಿಂದ ಬಾಕಿ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಒತ್ತಾಯಿಸಿದರು.
ಈಗಾಗಲೇ ಘೋಷಿಸಿದ ₹3,000 ಕೋವಿಡ್–19 ಪ್ರೋತ್ಸಾಹ ಧನ ಪಾವತಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಆಶಾಗಳಿಗೆ ಪಾವತಿಯಾಗುವಂತೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.
ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಮೇಶ ಹೊಸಮನಿ ಮಾತನಾಡಿ, ಎರಡು ತಿಂಗಳ ಹಿಂದೆ ಹೋರಾಟ ಮಾಡಿದಾಗ ಗೌರವ ಧನ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭರವಸೆ ನೀಡಿದ್ದರು. ಭರವಸೆ ಈಡೇರಿಸಿಲ್ಲ ಎಂದು ದೂರಿದರು.
‘ದಿನೇ ದಿನೇ ದುಡಿತ ಹೆಚ್ಚಾಗುತ್ತದೆಯೇ ಹೊರತು ಗೌರವ ಧನ ಹೆಚ್ಚಾಗಿಲ್ಲ. ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಹಾಗೂ ಕೇಂದ್ರ ಸರ್ಕಾರದ ಚಟುವಟಿಕೆಗಳನ್ನು ಆಧರಿಸಿ ನೀಡುವ ಪ್ರೋತ್ಸಾಹ ಧನ ಸೇರಿ ₹10 ಸಾವಿರ ಸಿಗಬೇಕು. ಆದರೆ, ದೊರೆಯುತ್ತಿಲ್ಲ ಎಂದರು.
ನಗರ ಸಮಿತಿ ಅಧ್ಯಕ್ಷೆ ಭಾರತಿ ಶೆಟ್ಟರ್ ಮಾತನಾಡಿ, ಆಶಾ ಕಾರ್ಯಕರ್ತರ ಜೊತೆಗೆ ಸರ್ಕಾರವೇ ಇದೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ, ಈಗ ನಿರ್ಲಕ್ಷ್ಯ ಮಾಡಿದೆ. ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಬಸಮ್ಮ ಬಿದರಕುಂದಿ, ಶೋಭಾ ಪಡಕೆ, ರೇಣುಕಾ ಪಡಕೆ, ಲಕ್ಷ್ಮಿ ಸಂಬಳ ಮಠ, ಸಕ್ಕೂಬಾಯಿ ಉಪ್ಪಾರ್, ಲಕ್ಷ್ಮಿ ಹರಕುಣಿ, ಗಾಯತ್ರಿ ಗುಡ್ಡದ ಕೇರಿ, ನಿರ್ಮಲಾ ದೇವಿ ಕೊಪ್ಪ, ಜೈ ಶೀಲಾ ಐ ಬತ್ತಿ, ಶಿವಲೀಲಾ ನಿಂಬಕ್ಕನವರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.