ಹುಬ್ಬಳ್ಳಿ: ಕರ್ನಾಟಕದಿಂದ ಶಬರಿಮಲೆಗೆ ಯಾತ್ರೆ ಕೈಗೊಳ್ಳುವ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನುಕೂಲವಾಗುವಂತೆ, ಶಬರಿಮಲೆ ಸಮೀಪದ ಕೋಟಾಯಂ ಮತ್ತು ಚೆಂಗನೂರಿಗೆ ರಾಜ್ಯದಿಂದ ರೈಲು ಸಂಪರ್ಕ ಕಲ್ಪಿಸಿ ಕೊಡುವಂತೆ ಭಾರತೀಯ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಪದಾಧಿಕಾರಿಗಳು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮೂಲಕ, ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಬಳ್ಳೂರು ಉಮೇಶ್ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿದ ಪದಾಧಿಕಾರಿಗಳು, ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶಬರಿಮಲೆಗೆ ಕರ್ನಾಟಕದಿಂದ ಪ್ರತಿ ವರ್ಷ ಲಕ್ಷಾಂತರ ಭಕ್ತರು ಯಾತ್ರೆ ಕೈಗೊಳ್ಳುತ್ತಾರೆ. ಸದ್ಯ ಕರ್ನಾಟಕದಿಂದ ಕೇರಳದ ಕೋಟಾಯಂ ಹಾಗೂ ಚೆಂಗನೂರಿಗೆ ಹುಬ್ಬಳ್ಳಿಯಿಂದ ವಾರಕ್ಕೊಂದು ರೈಲು ಮಾತ್ರ ಚಲಿಸುತ್ತದೆ. ಇದರಲ್ಲಿ ಕೆಲವೇ ಭಕ್ತರು ಮಾತ್ರ ಹೋಗಲು ಸಾಧ್ಯವಾಗುತ್ತಿದ್ದು, ಉಳಿದವರು ಖಾಸಗಿ ವಾಹನಗಳಲ್ಲೇ ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಗಮನ ಸೆಳೆದರು.
ಯಾತ್ರೆಗೆ ಹೋಗುವ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಭಕ್ತರಿಗೆ ಅನುಕೂಲವಾಗುವಂತೆ ವಾರಕ್ಕೊಮ್ಮೆ ಸಂಚರಿಸುವ ಹುಬ್ಬಳ್ಳಿ–ಕೊಚುವೇಲಿ ಮತ್ತು ಕೊಚುವೇಲಿ–ಹುಬ್ಬಳ್ಳಿ ರೈಲನ್ನು ಕನ್ಯಾಕುಮಾರಿವರೆಗೆ ವಿಸ್ತರಿಸಿ ನಿತ್ಯ ಸಂಚರಿಸಬೇಕು. ಜೊತೆಗೆ ಸೊಲ್ಲಾಪುರ, ಮೀರಜ್, ಶಿವಮೊಗ್ಗ, ಬೀದರ್ನಿಂದ ಕನ್ಯಾಕುಮಾರಿವರೆಗೆ (ಕೇರಳದ ಕೋಟಾಯಂ, ಚೆಂಗನೂರು ಮಾರ್ಗವಾಗಿ) ರೈಲುಗಳನ್ನು ಆರಂಭಿಸಬೇಕು. ಇದರಿಂದ ಕಲಬುರ್ಗಿ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಯ ಭಕ್ತರಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.