ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣವಾಗಲಿದ್ದು, ಆ ನಂತರ ಹುಬ್ಬಳ್ಳಿಯಲ್ಲಿ ಸೈಕಲ್ ಸೇವೆ ಆರಂಭಿಸಲಾಗುವುದು ಎಂದು ನಗರ ಭೂ ಸಾರಿಗೆ ನಿರ್ದೇಶನಲಾನಯದ ವಿಶೇಷ ಅಧಿಕಾರಿ ಎನ್. ಮುರಳಿಕೃಷ್ಣ ಹೇಳಿದರು.
ಸುಸ್ಥಿರ ನಗರ ಸಾರಿಗೆ ಕುರಿತು ನಗರದಲ್ಲಿ ಶನಿವಾರ ನಡೆದ ಜ್ಞಾನ ವಿನಿಮಯ ಕಾರ್ಯಾಗಾರದಲ್ಲಿ ಮೋಟಾರು ವಾಹನೇತರ ಸಾರಿಗೆ ವಿಷಯ ಕುರಿತು ಮಾತನಾಡಿದರು. ‘ಮೈಸೂರಿನಲ್ಲಿ ಈಗಾಗಲೇ ‘ಟ್ರಿಣ್ ಟ್ರಿಣ್’ ಸೈಕಲ್ ಸೇವೆ ಆರಂಭಿಸಲಾಗಿದ್ದು, ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದೇ ಮಾದರಿಯನ್ನು ಈಗ ಬೆಂಗಳೂರಿನಲ್ಲಿಯೂ ಜಾರಿ ಮಾಡಲಾಗುತ್ತಿದೆ. ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿಯೂ ಸೈಕಲ್ ಟ್ರ್ಯಾಕ್ ನಿರ್ಮಾಣವಾಗಲಿದೆ. ಆ ನಂತರ ಇಲ್ಲಿಯೂ ಈ ಸೇವೆ ಆರಂಭಿಸಲಾಗುವುದು. ಇದರಿಂದ ನಗರ ಸಾರಿಗೆ ವ್ಯವಸ್ಥೆ ಸುಧಾರಣೆಯಾಗಲಿದೆ’ ಎಂದರು.
‘ಬಿಆರ್ಟಿಎಸ್ ಕಾರಿಡಾರ್ನಲ್ಲಿಯೂ ಕಡಿಮೆ ದೂರಕ್ಕೆ ಸೈಕಲ್ ಟ್ರ್ಯಾಕ್ ನಿರ್ಮಿಸಲು ಅವಕಾಶ ಇದೆ. ಈ ಸಾಧ್ಯತೆ ಬಗ್ಗೆಯೂ ಪರಿಶೀಲನೆ ಮಾಡಬಹುದು. ಬೆಂಗಳೂರು, ಮೈಸೂರಿನ ನಂತರ ಎರಡನೇ ಹಂತದ ನಗರಗಳಲ್ಲಿಯೂ ಸೈಕಲ್ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಎಲ್ಲ ಜಿಲ್ಲೆಗಳ ಅಭಿಪ್ರಾಯ ಕೇಳಲಾಗಿದೆ. ವಿಜಯಪುರ ಸೇರಿ 3 ಜಿಲ್ಲೆಗಳು ಸಕಾರಾತ್ಮಕ ಪ್ರತಿಕ್ರಿಯೆ ನೀಡಿವೆ. ಒಪ್ಪಿಗೆ ಸೂಚಿಸುವ ಜಿಲ್ಲೆಗಳಲ್ಲಿ ಇದು ಜಾರಿಯಾಗಲಿದೆ. ಮೊದಲು 5 ಕಿ.ಮೀ ದೂರದ ಟ್ರ್ಯಾಕ್ ನಿರ್ಮಾಣ ಮಾಡಿ, ಪ್ರತಿಕ್ರಿಯೆ ನೋಡಿಕೊಂಡು ಅದನ್ನು ವಿಸ್ತರಿಸಲಾಗುವುದು’ ಎಂದರು.
‘ಜಿಲ್ಲೆಗಳಲ್ಲಿ ಜಾರಿಗೊಳ್ಳುವ ಸೈಕಲ್ ಸೇವೆ ಯೋಜನೆಗೆ ಸರ್ಕಾರ ₹25 ಕೋಟಿ ಈಗಾಗಲೇ ನೀಡಿದ್ದು, ಇನ್ನೂ ₹25 ಕೋಟಿಯನ್ನು ನೀಡಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.