ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ನಡುವಿನ 30.6 ಕಿ.ಮೀ. ಬೈಪಾಸ್ ಷಟ್ಪಥ ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೆ ಫೆ. 28ರಂದು ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇಲ್ಲಿನ ಹೊರವಲಯದ ಗಬ್ಬೂರು ಬೈಪಾಸ್ ಬಳಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಶುಕ್ರವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಗಡ್ಕರಿ ಅವರು ಒಂದು ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಏಳು ಕಾಮಗಾರಿಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಜಗದೀಶ ಶೆಟ್ಟರ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ‘ ಎಂದು ತಿಳಿಸಿದರು.
ಹುಬ್ಬಳ್ಳಿ–ಹಾವೇರಿ ನಡುವೆ 63.4 ಕಿ.ಮೀ. ಷಟ್ಪಥ ರಸ್ತೆ (₹2,821.19 ಕೋಟಿ), ಹುಬ್ಬಳ್ಳಿ–ಹೊಸಪೇಟೆ ನಡುವಿನ 143 ಕಿ.ಮೀ.ಚತುಷ್ಪಥ ರಸ್ತೆ (₹2,722.26 ಕೋಟಿ), ರಾಷ್ಟ್ರೀಯ ಹೆದ್ದಾರಿ 218 ಮತ್ತು 63ರಿಂದ ಹುಬ್ಬಳ್ಳಿ ನಗರಕ್ಕೆ ಸಂಪರ್ಕ ಕಲ್ಪಿಸುವ 3.8 ಕಿ.ಮೀ. ಉದ್ದದ ರಸ್ತೆ (₹113.77 ಕೋಟಿ), ಬಂಕಾಪುರ ಚೌಕ್ದಿಂದ ರಾಣಿ ಚನ್ನಮ್ಮ ವೃತ್ತಕ್ಕೆ ಸಂಪರ್ಕ ಕಲ್ಪಿಸುವ 2.5 ಕಿ.ಮೀ. (₹39.09 ಕೋಟಿ) ರಸ್ತೆ, ವಿಜಯಪುರ–ಹುಬ್ಬಳ್ಳಿ ನಡುವೆ ಸಂಪರ್ಕ ಕಲ್ಪಿಸುವ 47 ಕಿ.ಮೀ. ಹೆದ್ದಾರಿ (₹165.67 ಕೋಟಿ), ಕಲಘಟಗಿ ಪಟ್ಟಣ ವ್ಯಾಪ್ತಿಯಲ್ಲಿ ದ್ವಿಪಥದಿಂದ ಚತುಷ್ಪಥವಾಗಿ ಅಭಿವೃದ್ಧಿ ಹೊಂದಿದ ಅಂಕೋಲಾ ಗೂಟಿ ವಿಭಾಗದ 4 ಕಿ.ಮೀ. ರಸ್ತೆ (₹50.23 ಕೋಟಿ) ಮತ್ತು ಧಾರವಾಡದ ಜುಬ್ಲಿ ವೃತ್ತದಿಂದ ನರೇಂದ್ರ ಬೈಪಾಸ್ಗೆ ಸಂಪರ್ಕಿಸುವ 5.62 ಕಿ.ಮೀ. (₹71.09) ರಸ್ತೆಗಳನ್ನು ಗಡ್ಕರಿ ಲೋಕಾರ್ಪಣೆ ಮಾಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.