ADVERTISEMENT

ಕಾರ್ಮಿಕರ ಮುಷ್ಕರ ಯಶಸ್ವಿಗೆ ಕರೆ

ವಿವಿಧ ಕಾರ್ಮಿಕ ಸಂಘಟನೆಗಳ ಜಂಟಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 14:49 IST
Last Updated 22 ನವೆಂಬರ್ 2020, 14:49 IST
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ವಿವಿಧ ಕಾರ್ಮಿಕ ಸಂಘಟನೆಗಳ ಸಭೆಯಲ್ಲಿ ಸಿಐಟಿಯು ಮುಖಂಡ ಮಹೇಶ ಪತ್ತಾರ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ವಿವಿಧ ಕಾರ್ಮಿಕ ಸಂಘಟನೆಗಳ ಸಭೆಯಲ್ಲಿ ಸಿಐಟಿಯು ಮುಖಂಡ ಮಹೇಶ ಪತ್ತಾರ ಮಾತನಾಡಿದರು   

ಹುಬ್ಬಳ್ಳಿ: ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ನ. 26ರಂದು ದೇಶವ್ಯಾಪಿ ಕರೆ ನೀಡಿರುವ ಮುಷ್ಕರವನ್ನು ಜಿಲ್ಲೆಯಲ್ಲಿಯೂ ಯಶಸ್ವಿಗೊಳಿಸಬೇಕು ಎಂದು ಕಾರ್ಮಿಕ ಸಂಘಟನೆಗಳು ಮನವಿ ಮಾಡಿವೆ.

ಎಪಿಎಂಸಿ, ಭೂ ಸುಧಾರಣಾ ಮತ್ತು ಕೃಷಿ ಸಂಬಂಧಿತ ಕಾನೂನು ತಿದ್ದುಪಡಿಗಳನ್ನು ಕೈ ಬಿಡಬೇಕು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು ಎನ್ನುವ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಚರ್ಚಿಸಲು ಭಾನುವಾರ ನಡೆದ ಕಾರ್ಮಿಕ ಸಂಘಟನೆಗಳ ಜಂಟಿ ಸಮಾವೇಶದಲ್ಲಿ ಮುಷ್ಕರದ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲಾಯಿತು.

ಸಿಐಟಿಯು ಮುಖಂಡ ಮಹೇಶ ಪತ್ತಾರ ಮಾತನಾಡಿ ‘ಕೃಷಿ ಸಂಬಂಧಿತ ಕಾನೂನುಗಳ ತಿದ್ದುಪಡಿಗಳು ಅನ್ನದಾತನ ಬೆನ್ನಹುರಿಯನ್ನೆ ಮುರಿಯಲಿವೆ. ವಿವಿಧ ಕಾನೂನುಗಳ ಬದಲಾವಣೆ ಮತ್ತು ತಿದ್ದುಪಡಿಯಲ್ಲಿ ಸಂವಿಧಾನದ ಮೂಲ ಆಶಯಗಳನ್ನೇ ಕೈ ಬಿಡಲಾಗಿದೆ. ದೇಶದ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವಹಿಸಿದ್ದ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ತೀವ್ರಗೊಳಿಸಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ದೇಶದ ಶೇ 99ರಷ್ಟು ಜನತೆಯ ಹಿತಾಸಕ್ತಿಗಿಂತ ದೇಶಿ ಮತ್ತು ವಿದೇಶಿ ಬಂಡವಾಳಿಗರ ಹಿತವೇ ಮುಖ್ಯವಾಗಿದೆ’ ಎಂದು ಟೀಕಿಸಿದರು.

ADVERTISEMENT

ಎಐಟಿಯುಸಿ ಮುಖಂಡ ದೇವಾನಂದ ಜಗಾಪೂರ ‘ಕೇಂದ್ರ ಸರ್ಕಾರ ಕೋವಿಡ್‌ ಪರಿಸ್ಥಿತಿಯ ದುರ್ಲಾಬ ಪಡೆದು ಸರ್ವಾಧಿಕಾರಿ ರೀತಿಯಲ್ಲಿ ನೀತಿಗಳನ್ನು ರೂಪಿಸಲಾಗುತ್ತಿದೆ’ ಎಂದು ಟೀಕಿಸಿದರು.

ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಬಿ.ಎಸ್.ಸೊಪ್ಪಿನ, ಗಂಗಾಧರ ಬಡಿಗೇರ, ಅಶೋಕ ಬಾರ್ಕಿ, ಬಾಲಕೃಷ್ಣ, ಬಿ.ಎನ್.ಪೂಜಾರಿ, ವಿಜಯ ಗುಂಟ್ರಾಳ ಜಿ,ಎಂ.ವೈದ್ಯ, ಬಿ.ಐ.ಈಳಿಗೇರ ಪಾಲ್ಗೊಂಡಿದ್ದರು. ಇತ್ತೀಚಿಗೆ ನಿಧನರಾದ ರೈತ ಮುಖಂಡ ಮಾರುತಿ ಮಾನ್ಪಡೆ, ಕಾರ್ಮಿಕ ಮುಖಂಡ ಎನ್.ಎ.ಖಾಜಿ ಮತ್ತು ಜಾನಪದ ವಿದ್ವಾಂಸ ಡಾ. ಟಿ.ಬಿ.ಸೊಲಬಕ್ಕನವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರಮುಖರಾದ ಬಸೀರ ಮುಧೋಳ, ಎ.ಎಸ್. ಪೀರಜಾದೆ, ಪುಂಡಲೀಕ ಬಡಿಗೇರ, ಚಿದಾನಂದ ಸವದತ್ತಿ, ಲಲಿತಾ ಹಿರೇಮಠ, ಭುವನಾ, ಅಂಜನಾ ಬಡಿಗೇರ, ಮಂಜು ದೊಡ್ಡಮನಿ, ಗುರುಸಿದ್ದಪ್ಪ ಅಂಬಿಗೇರ, ಮಂಜುನಾಥ ಹುಜರಾತಿ ಇದ್ದರು.

ಸಿದ್ಧತಾ ಸಭೆ: ಶನಿವಾರ ನಗರದ ಸಿದ್ಧಾರೂಢ ಮಠದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಸಿದ್ಧತಾ ಸಭೆಯಲ್ಲಿ ಎಐಯುಟಿಯುಸಿ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ ‘ಈಗಿನ ಕೇಂದ್ರ ಬಿಜೆಪಿ ಸರ್ಕಾರ ಸಂಸತ್ತಿನಲ್ಲಿ ತನಗಿರುವ ಬಹುಮತದ ದುರ್ಲಾಬ ಪಡೆದು ಸಾರ್ವಜನಿಕ ಹಾಗೂ ಸರ್ಕಾರಿ ವಲಯದ ಉದ್ಯಮಗಳನ್ನು ಮಾರಾಟ ಮಾಡುತ್ತಿದೆ’ ಎಂದು ಆರೋಪಿಸಿದರು.

ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ರಮೇಶ ಹೊಸಮನಿ, ಮುಖಂಡರಾದ ಬಸವರಾಜ, ವೀರಣ್ಣ, ಸಂಗೀತ ,ಅನ್ನಪೂರ್ಣ, ಲಕ್ಷ್ಮಿ, ರೇಣುಕಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.