ADVERTISEMENT

ಸಾರ್ವಜನಿಕರಿಂದ ಅಹವಾಲುಗಳ ಮಹಾಪೂರ

ಕೇಂದ್ರ ಸಚಿವ ಜೋಶಿಯಿಂದ ಅಹವಾಲು ಸ್ವೀಕಾರ; ಸಮಸ್ಯೆ ಸ್ಪಂದಿಸಲು ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 14:27 IST
Last Updated 20 ಜುಲೈ 2019, 14:27 IST
ಮನೆ ಖಾಲಿ ಮಾಡುವಂತೆ ಅರಣ್ಯ ಇಲಾಖೆ ನೋಟಿಸ್ ಕೊಟ್ಟಿರುವುದರಿಂದ ನಮ್ಮ ಬದುಕು ಅತಂತ್ರವಾಗಿದೆ ಎಂದು ದೇವಗಿರಿ ಮತ್ತು ಲಾಳ್ಳಗಟ್ಟಿ ಗ್ರಾಮಸ್ಥರು ಸಚಿವ ಜೋಶಿ ಅವರ ಬಳಿ ಅಳಲು ತೋಡಿಕೊಂಡರು
ಮನೆ ಖಾಲಿ ಮಾಡುವಂತೆ ಅರಣ್ಯ ಇಲಾಖೆ ನೋಟಿಸ್ ಕೊಟ್ಟಿರುವುದರಿಂದ ನಮ್ಮ ಬದುಕು ಅತಂತ್ರವಾಗಿದೆ ಎಂದು ದೇವಗಿರಿ ಮತ್ತು ಲಾಳ್ಳಗಟ್ಟಿ ಗ್ರಾಮಸ್ಥರು ಸಚಿವ ಜೋಶಿ ಅವರ ಬಳಿ ಅಳಲು ತೋಡಿಕೊಂಡರು   

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಶನಿವಾರ ತಮ್ಮ ನಿವಾಸದಲ್ಲಿ ನಡೆಸಿದ ಸಾರ್ವಜನಿಕರ ಅಹವಾಲು ಸ್ವೀಕಾರದಲ್ಲಿ, ದೂರುಗಳ ಮಹಾಪೂರವೇ ಹರಿದು ಬಂದಿತ್ತು.

ವರ್ಗಾವಣೆ, ಮನೆ ಒಕ್ಕಲೆಬ್ಬಿಸುವುದು, ಪರಿಹಾರ ಬಾರದಿರುವುದು, ಉದ್ಯೋಗ ನೇಮಕಾತಿ ಸೇರಿದಂತೆ ಹಲವು ಸಮಸ್ಯೆಗಳು, ದೂರು ಹಾಗೂ ಸಚಿವರ ಶಿಫಾರಸು ಪತ್ರಕ್ಕಾಗಿ ಜಿಲ್ಲೆಯ ವಿವಿಧ ಭಾಗಗಳಿಂದ ನಾಗರಿಕರು ಬಂದಿದ್ದರು. ಎಲ್ಲರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದ ಜೋಶಿ, ಕೆಲ ದೂರುಗಳಿಗೆ ಸಂಬಂಧಪಟ್ಟಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಕರೆ ಮಾಡಿ ಕ್ರಮಕ್ಕೆ ಸೂಚಿಸಿದರು.

ತೆರವಿಗೆ ತಡೆ:

ADVERTISEMENT

ಧಾರವಾಡ ತಾಲ್ಲೂಕಿನ ದೇವಗರಿ ಮತ್ತು ಲಾಳ್ಳಗಟ್ಟಿ ಗ್ರಾಮದ ಅರಣ್ಯ ಭೂಮಿಯ ಸರ್ವೆ ನಂ. 97 ಮತ್ತು 82ರಲ್ಲಿ ವಾಸಿಸುತ್ತಿರುವ 80 ಮನೆಗಳನ್ನು 30 ದಿನದೊಳಗೆ ಖಾಲಿ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಇದರಿಂದ ಕಂಗಲಾದ ಗ್ರಾಮಸ್ಥರು ಮನವಿಯೊಂದಿಗೆ ಜೋಶಿ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡರು.

ಸ್ಥಳದಲ್ಲೇ ಸಹಾಯಕ ಅರಣ್ಯಾಧಿಕಾರಿಗೆ ಕರೆ ಮಾಡಿದ ಜೋಶಿ, ‘ಗ್ರಾಮಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡುವವರೆಗೆ ತೆರವು ಕಾರ್ಯಾಚರಣೆ ಮಾಡಬೇಡಿ. ಅಲ್ಲಿರುವ ಜನರಿಗೆ ಸರ್ಕಾರವೇ ಇಂದಿರಾ ಆವಾಸ್ ಮತ್ತು ಬಸವ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ. ಓಡಾಡಲು ರಸ್ತೆಗಳನ್ನು ಸಹ ಮಾಡಿಕೊಟ್ಟಿದೆ. ಇದೀಗ ದಿಢೀರನೆ ಖಾಲಿ ಮಾಡಿ ಎಂದರೆ, ಎಲ್ಲಿಗೆ ಹೋಗಬೇಕು?’ ಎಂದು ಪ್ರಶ್ನಿಸಿದರು.

‘ಈ ವಿಷಯದ ಬಗ್ಗೆ ನಾನು ಜಿಲ್ಲಾಧಿಕಾರಿ ಜತೆಗೂ ಮಾತನಾಡುತ್ತೇನೆ. ಅಲ್ಲಿಯವರೆಗೆ ಜನರಿಗೆ ಯಾವುದೇ ರೀತಿಯಲ್ಲೂ ತೊಂದರೆ ಕೊಡಬೇಡಿ’ ಎಂದು ಸೂಚಿಸಿದರು.

ಪರಿಹಾರದಲ್ಲಿ ವ್ಯತ್ಯಾಸ:

ಗದಗ –ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಎಲ್ಲರೂ ಸಮಾನವಾಗಿ ಭೂಮಿ ನೀಡಿದ್ದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಿದೆ. ಕೆಲವರಿಗೆ ಹೆಚ್ಚು ಮೊತ್ತ ಕೊಟ್ಟು, ಉಳಿದವರಿಗೆ ಕಡಿಮೆ ಕೊಟ್ಟಿದೆ. ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನೀವಾದರೂ ನನಗೆ ನ್ಯಾಯ ಕೊಡಿಸಿ ಎಂದು ಹುಬ್ಬಳ್ಳಿ ತಾಲ್ಲೂಕಿನ ಭಂಡಿವಾಡ, ಮಂಟೂರ ಹಾಗೂ ಶಿರಗುಪ್ಪಿ ಗ್ರಾಮದ ರೈತರು ಸಚಿವರಿಗೆ ಮೊರೆ ಇಟ್ಟರು.

ರೈತರ ಮನವಿ ಸ್ವೀಕರಿಸಿದ ಜೋಶಿ, ‘ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿ ನಿಮಗೆ ನ್ಯಾಯ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು.

ಅನಾರೋಗ್ಯದ ನಡುವೆಯೂ ಸಮಸ್ಯೆ ಹೊತ್ತು ಮನೆವರೆಗೆ ಬಂದಿದ್ದ ಎಲ್ಲಾ ಸಾರ್ವಜನಿಕರಿಂದಲೂ ಮನವಿ ಸ್ವೀಕರಿಸಿದ ಜೋಶಿ, ಈ ಬಗ್ಗೆ ಫಾಲೋಅಪ್ ಮಾಡುವಂತೆ ತಮ್ಮ ಆಪ್ತ ಕಾರ್ಯದರ್ಶಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.