ADVERTISEMENT

ರೈತ ಮಹಿಳೆ ಕುರಿತು ಹೇಳಿಕೆ: ಮುಖ್ಯಮಂತ್ರಿ ಕ್ಷಮೆಯಾಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 7:55 IST
Last Updated 19 ನವೆಂಬರ್ 2018, 7:55 IST

ಹುಬ್ಬಳ್ಳಿ: ಮುಖ್ಯಮಂತ್ರಿ ಕುಮಾರಸ್ವಾಮಿ ರೈತರಿಗೆ ಸುಳ್ಳು ಆಶ್ವಾಸನೆ ನೀಡುತ್ತಿದ್ದು, ರೈತ ಮಹಿಳೆಗೆ ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದಿ ಎಂದು ಕೇಳಿ ರಾಜ್ಯದ ರೈತ ಮಹಿಳೆಗೆ ಅವಮಾನ ಮಾಡಿದ್ದಾರೆ‌. ಮುಖ್ಯಮಂತ್ರಿ ಕೂಡಲೇ ಕ್ಷಮೆಯಾಚನೆ ಮಾಡಬೇಕು ಎಂದು ಉತ್ತರ ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ಯಾಯದ ವಿರುದ್ಧ ಧ್ವನಿ ಎತ್ತಿರುವ ಜಯಶ್ರೀ ಎಂಬ ರೈತ ಮಹಿಳೆಗೆ ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೇ ಎಂದು ಅವಮಾನಿಸಿರುವುದು ಖಂಡನೀಯ ಎಂದರು.

ಕುಮಾರಸ್ವಾಮಿ ಸುಳ್ಳು ಆಶ್ವಾಸನೆ ನೀಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಬೇಡಿಕೆ ಈಡೇರಿಸುವ ಕುರಿತು ಮನವಿ ಸಲ್ಲಿಸಿದರೆ ರೈತರು ಗೂಂಡಾಗಳು ಎಂದು ಹಣೆಪಟ್ಟಿ ಕಟ್ಟುತ್ತಿರುವ ಮುಖ್ಯಮಂತ್ರಿಗಳ ವರ್ತನೆ ಸರಿಯಲ್ಲ ಎಂದರು.ಈ ಹಿಂದೆ ರೈತ ಸಂಘಟನೆಗಳು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಅವರಿಗೆ ಉತ್ತರ ಕರ್ನಾಟಕದ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದ್ದವು. ಎರಡು ದಿನಗಳಲ್ಲಿ ಉತ್ತರ ಕರ್ನಾಟಕದ ರೈತರ ಸಮಸ್ಯೆ ಆಲಿಸಿ ಶೀಘ್ರವೇ ನಿರ್ಧಾರ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಅವರ ಎಲ್ಲ ಆಶ್ವಾಸನೆ ಸುಳ್ಳು ಎಂದು ಅವರೇ ನಿರೂಪಿಸಿದ್ದಾರೆ. ಉತ್ತರ ಕರ್ನಾಟಕದವರು ನನಗೆ ಮತದಾನ ಮಾಡಿದ್ದಾರೆಯೇ ಎಂದು ಕೇಳುತ್ತಿರುವುದನ್ನು ನೋಡಿದರೆ ಉತ್ತರ ಕರ್ನಾಟಕದ ಮೇಲಿನ ನಿರ್ಲಕ್ಷ್ಯ ಧೋರಣೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹರಿಹಾಯ್ದರು.

ADVERTISEMENT

ಶೀಘ್ರವೇ ಕ್ಷಮೆ ಯಾಚಿಸಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಮುಂಬರುವ ಬೆಳಗಾವಿ ಅಧಿವೇಶನದ ವೇಳೆ ಉಗ್ರಹೋರಾಟ ಮಾಡಲಾಗುತ್ತದೆ. ಅಧಿವೇಶನಕ್ಕೆ ಅಡ್ಡಿ ಪಡಿಸಲಾಗುವುದು ಎಂದರು.

ಮುಖ್ಯಮಂತ್ರಿ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಬೆಳಗಾವಿ ವಿಧಾನಸೌಧಕ್ಕೆ ಬಂದು ಇತ್ಯರ್ಥಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.