ADVERTISEMENT

29ರಂದು ಬಾಗಲಕೋಟೆಯಲ್ಲಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 12:54 IST
Last Updated 27 ನವೆಂಬರ್ 2020, 12:54 IST

ಹುಬ್ಬಳ್ಳಿ: ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನ. 29ರಂದು ಬಾಗಲಕೋಟೆಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕಾಗಿನೆಲೆ ಕರ್ನಾಟಕ ರಾಜ್ಯ ಕುರುಬ ಸಮಾಜದ ಎಸ್‌.ಟಿ. ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಸಿದ್ದಣ್ಣ ತೇಜಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕುರುಬ ಸಮಾಜದ ಕೆಲವರಿಗೆ ಮಾತ್ರ ಪರಿಶಿಷ್ಟ ಪಂಗಡದ ಮೀಸಲಾತಿ ಸಿಕ್ಕಿದ್ದು, ಇನ್ನೂ ಹಲವರಿಗೆ ಸಿಕ್ಕಿಲ್ಲ. ಇದಕ್ಕಾಗಿ ಬಹಳಷ್ಟು ವರ್ಷಗಳಿಂದ ಹೋರಾಟ ಮಾಡಿದರೂ ಪ್ರಯೋಜವಾಗಿಲ್ಲ. ಈಗ ಆರಂಭಿಸಿರುವ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಗುವ ತನಕ ಬಿಡುವುದಿಲ್ಲ. ಸಮಾವೇಶದ ಯಶಸ್ವಿಗಾಗಿ ಎಲ್ಲಾ ತಾಲ್ಲೂಕುಗಳಲ್ಲಿಯೂ ಸಭೆಗಳನ್ನು ಮಾಡಲಾಗಿದ್ದು, ಸುಮಾರು ಎರಡು ಲಕ್ಷ ಜನ ಸೇರುವ ನಿರೀಕ್ಷೆಯಿದೆ’ ಎಂದರು.

‘ಕಾಗಿನೆಲೆ ಪೀಠದ ಪೀಠಾಧೀಶರು ಮತ್ತು ಸಮಾಜದ ಜನಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ನಮ್ಮ ಬೇಡಿಕೆಯ ಮನವಿ ಸಲ್ಲಿಸಿದೆ. ಬಾಗಲಕೋಟೆ ಸಮಾವೇಶದ ಪೂರ್ವದಲ್ಲಿ ಬೇಡಿಕೆ ಈಡೇರದೆ ಹೋದರೆ ಮುಂಬರುವ ದಿನಗಳಲ್ಲಿ ರಾಯಚೂರು, ಬೀದರ್‌, ದಾವಣಗೆರೆ ಮತ್ತು ಮೈಸೂರಿನಲ್ಲಿ ಸಮಾವೇಶಗಳನ್ನು ನಡೆಸಲಾಗುವುದು. ಅಂತಿಮವಾಗಿ ಕಾಗಿನೆಲೆಯಿಂದ ಬೆಂಗಳೂರಿನ ತನಕ ‌ಪಾದಯಾತ್ರೆ ನಡೆಸಲಾಗುವುದು. ಸಮಾಜದ ಪ್ರಮುಖ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕರು ಬೆಂಬಲ ನೀಡಿದ್ದಾರೆ’ ಎಂದರು.

ADVERTISEMENT

ಸಮಿತಿಯ ಪ್ರಮುಖರಾದ ಚನ್ನಪ್ಪಗೌಡ್ರ, ಅಣ್ಣಪ್ಪ ಓಲೇಕಾರ, ಎಚ್‌.ಎಫ್‌. ಇಬ್ರಾಹಿಂಪುರ, ನಾಗಭೂಷಣ ಕಾಳೆ ಮತ್ತು ಜ್ಯೋತಿ ವಾಲಿಕಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.