ಹುಬ್ಬಳ್ಳಿ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಂಪುಟದಲ್ಲಿ ಧಾರವಾಡ ಜಿಲ್ಲೆಯ ಶಾಸಕರಿಗೆ ಪ್ರಾತಿನಿಧ್ಯ ಕೊಡಬೇಕು ಎಂದು ಮನಸೂರಿನ ಕನಕ ಭವನದ ರೇವಣಸಿದ್ದೇಶ್ವರ ಮಹಾಮಠದ ಬಸವರಾಜ ದೇವರು ಆಗ್ರಹಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಈ ಭಾಗದವರೇ ಮುಖ್ಯಮಂತ್ರಿ ಆಗಿರುವುದರಿಂದ ಉತ್ತರ ಕರ್ನಾಟಕದ ಸಮಗ್ರ ಆಭಿವೃದ್ಧಿಗೆ ಆದ್ಯತೆ ನೀಡಬೇಕು. ಕೆ.ಎಸ್. ಈಶ್ವರಪ್ಪ ಹಾಗೂ ಅರವಿಂದ ಬೆಲ್ಲದ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಬೇಕು, ಶಾಸಕರಾದ ಶಂಕರಪಾಟೀಲ ಮುನೇನಕೊಪ್ಪ ಮತ್ತು ಅಮೃತ ದೇಸಾಯಿ ಅವರನ್ನು ಸಚಿವರನ್ನಾಗಿ ಮಾಡಬೇಕು’ ಎಂದರು.
ಸ್ವಾಮೀಜಿಗಳು ರಾಜಕಾರಣಿಗಳ ಪರ ಲಾಬಿ ಮಾಡುತ್ತಿರುವುದು ಸರಿಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಈಗಿನ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಸ್ವಾಮೀಜಿಗಳಿಗೂ ರಾಜಕಾರಣದ ನಂಟು ಇದೆ. ಕೆಲಸ ಮಾಡುವವರ ಪರ ಒತ್ತಡ ಹಾಕದಿದ್ದರೆ ಯಾರಿಗೂ ಸ್ಥಾನಮಾನ ಸಿಗುವುದಿಲ್ಲ’ ಎಂದರು.
‘ನನ್ನನ್ನೂ ಸೇರಿದಂತೆ ಸ್ವಾಮೀಜಿಗಳ ಈ ನಡೆ ಸರಿಯಲ್ಲ. ಸ್ವಾಮೀಜಿಗಳೆಂದರೆ ಎಲ್ಲ ಧರ್ಮಗಳನ್ನು ಸಮನ್ವಯತೆಯಿಂದ ನೋಡಬೇಕು. ಈಗಿನ ಪರಿಸ್ಥಿತಿ ಬೇಸರ ತರಿಸಿದೆ’ ಎಂದರು.
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಮತ್ತು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಲು ಮುಂದಿನ ವಾರ ಮುಖ್ಯಮಂತ್ರಿ ಬಳಿ ಸಮಾಜದ ಪ್ರಮುಖರ ನಿಯೋಗ ಕರೆದುಕೊಂಡು ಹೋಗಲಾಗುವುದು ಎಂದು ತಿಳಿಸಿದರು.
ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ತಾಲೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.