ADVERTISEMENT

ಧಾರವಾಡ | 'ಕಾವ್ಯ ಪರಂಪರೆಗೆ ಕಣವಿ ಕೊಡುಗೆ ಅಪಾರ'  

ಕವಿ ಚೆನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿ ದತ್ತಿ: ವಿಮರ್ಶಕ ರಹಮತ್ ತರಿಕೇರಿ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 15:56 IST
Last Updated 28 ಜೂನ್ 2025, 15:56 IST
ಧಾರವಾಡದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆಯಲ್ಲಿ ವಿಜೇತರಾದ ಮಧು ಕಾರಗಿ (ಪ್ರಥಮ) ಜಯಶ್ರೀ ಇಡ್ಕಿದು (ದ್ವಿತೀಯ) ಸಂಜೀವ ಜಗ್ಲಿ ಹಾಗೂ ಚಂದನ ನಾಯ್ಕ (ತೃತೀಯ) ಅವರಿಗೆ ಗಣ್ಯರು ಬಹುಮಾನ ವಿತರಿಸಿದರು 
ಧಾರವಾಡದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆಯಲ್ಲಿ ವಿಜೇತರಾದ ಮಧು ಕಾರಗಿ (ಪ್ರಥಮ) ಜಯಶ್ರೀ ಇಡ್ಕಿದು (ದ್ವಿತೀಯ) ಸಂಜೀವ ಜಗ್ಲಿ ಹಾಗೂ ಚಂದನ ನಾಯ್ಕ (ತೃತೀಯ) ಅವರಿಗೆ ಗಣ್ಯರು ಬಹುಮಾನ ವಿತರಿಸಿದರು    

ಧಾರವಾಡ: ‘ಚೆನ್ನವೀರ ಕಣವಿ ಅವರು ಕನ್ನಡ ಸಾಹಿತ್ಯ ಲೋಕದ ಬಹುಮುಖ ವ್ಯಕ್ತಿತ್ವದ ಕವಿಯಾಗಿದ್ದರು. ಭಾರತದ ವಿವಿಧ ಭಾಷೆಗಳ ಜಾಗತಿಕ ಕವಿಗಳ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ ಕಾವ್ಯಪರಂಪರೆಯನ್ನು ಸಮೃದ್ಧಗೊಳಿಸಿದ್ದಾರೆ’ ಎಂದು ವಿಮರ್ಶಕ ರಹಮತ್ ತರಿಕೇರಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಕವಿ ಚೆನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿ ದತ್ತಿ ಅಂಗವಾಗಿ ಶನಿವಾರ ಆಯೋಜಿಸಿದ್ದ ಚೆನ್ನವೀರ ಕಣವಿ ಕಾವ್ಯಸ್ಪರ್ಧೆ ಮತ್ತು ಶಾಂತಾದೇವಿ ಕಣವಿ ಕಥಾಸ್ಪರ್ಧೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚೆನ್ನವೀರ ಕಣವಿ ಹಾಗೂ ಜಿ.ಎಸ್. ಶಿವರುದ್ರಪ್ಪ ಅವರು ಪ್ರತಿಭೆ, ಪರಿಶ್ರಮದಿಂದ ಕನ್ನಡದ ಶ್ರೇಷ್ಠ ಕವಿ ವಿಮರ್ಶಕರಾಗಿರುವುದು ಒಂದು ವಿಸ್ಮಯವೇ ಆಗಿದೆ. ಅವರ ನಡುವೆ ಉತ್ತಮ ಅವಿನಾಭಾವ ಸಂಬಂಧವಿತ್ತು’ ಎಂದರು.

ADVERTISEMENT

‘ರಾಜ್ಯದ ಸಾಹಿತ್ಯ ಲೋಕದಲ್ಲಿ ಸಾಹಿತ್ಯ ದಂಪತಿ ಬಹಳ ವಿರಳ. ಶಾಂತಾದೇವಿ ಕಣವಿ ಅದ್ಭುತ ಕಥೆಗಾರರು ಹೌದು. ಚನ್ನವೀರ ಕಣವಿ ಅವರಿಗೆ ಸಿಕ್ಕ ಮನ್ನಣೆ ಶಾಂತಾದೇವಿ ಅವರ ಕಥೆಗಳಿಗೆ ಸಿಗದೇ ಇರುವುದು ಬೇಸರದ ಸಂಗತಿ’ ಎಂದು ಹೇಳಿದರು.

ಸಾಹಿತಿ ಜಿ.ಎಂ.ಹೆಗಡೆ ಮಾತನಾಡಿ, ‘ಕಣವಿ ಅವರು ಕನ್ನಡದಲ್ಲಿ ಸಮೃದ್ಧವಾದ ಕಾವ್ಯಪರಂಪರೆಯನ್ನು ನಿರ್ಮಿಸಿದವರು. ಉತ್ತರ ಕರ್ನಾಟಕದ ಬಹಳಷ್ಟು ಯುವಕವಿಗಳಿಗೆ ಕಾವ್ಯಗುರುಗಳಾಗಿ ಕಾವ್ಯ ಭಾಷೆ, ಕಾವ್ಯ ರಚನೆಯನ್ನು ಕಲಿಸಿದ್ದಾರೆ. ಯುವ ಕವಿಗಳ ಕಾವ್ಯಗಳಿಗೆ ಮುನ್ನುಡಿ ಬರೆಯುವ ಪ್ರೋತ್ಸಾಹ ನೀಡಿದ್ದಾರೆ’ ಎಂದರು.

‘ಕಣವಿ ಅವರು ತಮ್ಮ ಕಾವ್ಯಗಳಲ್ಲಿ ಮಳೆ ಮತ್ತು ನಿಸರ್ಗ ಪ್ರೀತಿಯನ್ನು ಸ್ಥಾಯೀಭಾವವಾಗಿ ಪ್ರಕಟಿಸುತ್ತಾ ಬಂದಿದ್ದಾರೆ. ಕುವೆಂಪು ಸೂರ್ಯೋದಯದ ಕವಿ, ಬೇಂದ್ರೆ ಶ್ರಾವಣದ ಕವಿ, ಕಣವಿ ಮಳೆಗಾಲದ ಕವಿ ಎಂದು ಗುರುತಿಸಲಾಗಿದೆ. ಕನ್ನಡ ಕಾವ್ಯಪರಂಪರೆಯ ಜ್ಞಾನ ಯುಕವಿಗಳಿಗೆ ಅಗತ್ಯವಿದೆ. ಹಿರಿಯ ಕವಿಗಳ ಕವಿತೆಯ ಸಂಕಲನಗಳು ಸಮಗ್ರ ಕಾವ್ಯವಾಗಿ ಪ್ರಕಟವಾಗಿವೆ. ಕವಿಗಳಾಗುವವರು ಎಲ್ಲ ಕಾವ್ಯಗಳನ್ನು ಓದಬೇಕು’ ಎಂದರು.

ಸಂಘದ ಉಪಾಧ್ಯಕ್ಷ ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಪ್ರಜ್ಞಾ ಮತ್ತಿಹಳ್ಳಿ, ಶಿವಾನಂದ ಕಣವಿ, ಶಂಕರ ಹಲಗತ್ತಿ, ಶಂಕರ ಕುಂಬಿ ಉಪಸ್ಥಿತರಿದ್ದರು.

ಧಾರವಾಡದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯಲ್ಲಿ ವಿಜೇಯಿತರಾದ  ದಿವ್ಯಶ್ರೀ ಅದರಂತೆ (ಪ್ರಥಮ) ರಂಜಿತಾ ಮಹಾಜನ (ದ್ವಿತೀಯ) ದಿವ್ಯಶ್ರೀ ಹಡಪದ ಹಾಗೂ ಕಾವ್ಯ ಕೆ.ಎಸ್. (ತೃತೀಯ) ಬಹುಮಾನ ಪ್ರಧಾನ ಮಾಡಲಾಯಿತು 

ಕಾವ್ಯ ಪರಂಪರೆ ಸಮೃದ್ಧಗೊಳಿಸಿದ ಕವಿ ಯುವ ಕವಿಗಳಿಗೆ ಕಾವ್ಯ ಗುರುವಾಗಿದ್ದ ಕಣವಿ ಸಾಹಿತ್ಯ ಲೋಕದ ವಿರಳ ದಂಪತಿ

‘ಅಕ್ಷರ ಲೋಕಕ್ಕೆ ಕರೆತನ್ನಿ’ ‘ಪ್ರಸ್ತುತ ಅಕ್ಷರ ಮತ್ತು ಮುದ್ರಣ ಲೋಕದಿಂದ ಓದುಗರು ಕಣ್ಮರೆಯಾಗಿ ದೃಶ್ಯಲೋಕದ ಕಡೆಗೆ ಸಾಗುತ್ತಿದ್ದಾರೆ. ಯುವ ಬರಹಗಾರರು ಪ್ರಶಸ್ತಿಗಳ ನಶೆ ಮತ್ತು ವ್ಯಸನಕ್ಕೆ ಹೋಗದೆ ಹಿರಿಯ ಕವಿಗಳ ಉತ್ತೇಜನ ಪಡೆದು ಓದುಗರನ್ನು ಮತ್ತೆ ಅಕ್ಷರ ಲೋಕಕ್ಕೆ ತರುವ ಜವಾಬ್ದಾರಿ ವಹಿಸಿಕೊಳ್ಳಬೇಕು‘ ಎಂದು ವಿಮರ್ಶಕ ರಹಮತ್ ತರಿಕೇರಿ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.