ನವಲಗುಂದ: ‘ಉತ್ತರ ಕರ್ನಾಟಕದ ಯಲ್ಲಮ್ಮದೇವಿ ಕ್ಷೇತ್ರವನ್ನು ಅಭಿವೃದ್ಧಿ ಪಡೆಸಲು ನಿರ್ಣಯಿಸಿದ ಮಾದರಿಯಲ್ಲಿ ನವಲಗುಂದ ನಾಗಲಿಂಗಜ್ಜನ ಮಠದ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು’ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ಸೋಮವಾರ ಪಟ್ಟಣದಲ್ಲಿನ ಅಜಾತ ನಾಗಲಿಂಗಜ್ಜನ ಆರಾಧನಾ ಪಲ್ಲಕ್ಕಿ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ‘ಮಠದ ಗದ್ದುಗೆ ಮೇಲೆ ಪಂಜೆ ಹಾಗೂ ಬೈಬಲ್ ಇಟ್ಟು ಪೂಜೆ ಸಲ್ಲಿಸುವ ಮೂಲಕ ಹಿಂದೂ ಮುಸ್ಲಿಮರು ಭಾವೈಕ್ಯತೆಯಿಂದ ಜಾತ್ರೆ ಆಚರಿಸಲಾಗುತ್ತದೆ’ ಎಂದರು.
ಅಜ್ಜನ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷ ಕೂಡ ಮಠದಿಂದ ಚಾಲನೆ ನೀಡಿ, ಅಜ್ಜನ ಪಲ್ಲಕ್ಕಿಯು ಪ್ರಮುಖ ಬೀದಿಗಳ ಮೂಲಕ ಗ್ರಾಮದೇವಿ ದೇವಸ್ಥಾನದ ವರೆಗೆ ಹೋಗಿ ತಾಯಿಗೆ ಉಡಿ ತುಂಬಿ ಮರಳಿ ಮಠಕ್ಕೆ ತಲುಪುತ್ತದೆ.
ಜಾತ್ರೆಯು ಸಂಗೀತ ಕಾರ್ಯಕ್ರಮ ಹಾಗೂ ಪುರವಂತರೊಂದಿಗೆ ಶಸ್ತ್ರಾಭ್ಯಾಸ ವಿವಿಧ ವಾಧ್ಯಗಳೊಂದಿಗೆ ಪ್ರಾರಂಭವಾಯಿತು. ಮೊದಲನೇ ಆರಾಧನ ದಿನ ಮಾದಲಿ ಪ್ರಸಾದ ನೈವೆದ್ಯದೊಂದಿಗೆ ಪ್ರಾರಂಭವಾಗಿ ಎರಡು ದಿವಸ ಅನ್ನಪ್ರಸಾದ ನಡೆಸಲಾಗುತ್ತದೆ.
ನಗರದ ಗಾಂಧಿ ಮಾರುಕಟ್ಟೆಯಲ್ಲಿ ಸರ್ಕಾರದಿಂದ ₹20 ಲಕ್ಷ ವೆಚ್ಚದಲ್ಲಿ ನಾಗಲಿಂಗಜ್ಜನ ಪ್ರವೇಶ ದ್ವಾರ (ಕಮಾನ) ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದು ಮುಂದಿನ ವರ್ಷದೊಳಗೆ ಉದ್ಘಾಟನೆ ಮಾಡಲಾಗುವುದು ಎಂದು ಕೋನರಡ್ಡಿ ಹೇಳಿದರು.
ನಾಗಲಿಂಗ ಸ್ವಾಮಿಗಳ ಮೇಣೆ, ಪಲ್ಲಕ್ಕಿ ಉತ್ಸವವನ್ನು ಸಂಪ್ರದಾಯದಂತೆ ಭೋವಿ ಸಮಾಜದವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ಮಾಡಿದರು.
ಮಠದ ಪೀಠಾಧ್ಯಕ್ಷ ವೀರಯ್ಯ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ, ಸಿಪಿಐ ರವಿ ಕಪ್ಪತನವರ, ಶಿವಾನಂದ ಅಂಬಿಗೇರ, ಪಿಎಸ್ಐ ಜನಾರ್ಥನ ಬಿ., ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸಿದ್ದಯ್ಯ ಸ್ವಾಮೀಜಿ, ವಿನೋದ ಅಸೂಟಿ, ಆನಂದ ಹವಳಕೋಡ, ಮಂಜು ಜಾಧವ, ವಿದಾನಸಭಾ ಕ್ಷೇತ್ರ ಯುತ್ ಕಾಂಗ್ರೆಸ್ ಅಧ್ಯಕ್ಷ ವಿಕಾಸ ತದ್ದೆವಾಡಿ, ಮದರಸಾಬ ಉಗರಗೋಳ, ಪ್ರಕಾಶ ಗೋಂದಳೆ, ಭರಮಪ್ಪ ಕಾತರಕಿ, ನರಸಪ್ಪ ಬಡಿಗೇರ, ಪ್ರಕಾಶ ಭೋವಿ, ಸುರೇಶ ಹಡಪದ ಮುಂತಾದವರು ಭಾಗವಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.