ADVERTISEMENT

ಎಟಿಎಂ ಕಾರ್ಡ್‌ ಸಂಖ್ಯೆ, ಒಟಿಪಿಯನ್ನು ಯಾವುದೇ ಕಾರಣಕ್ಕೂ ನೀಡದಿರಿ- ಮಯೂರ ಕಾಂಬಳೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 6:27 IST
Last Updated 15 ಜನವರಿ 2022, 6:27 IST
ತಾಲ್ಲೂಕಿನ ಮುಕ್ಕಲ ಗ್ರಾಮದಲ್ಲಿ ನಡೆದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಮಯೂರ ಕಾಂಬಳೆ ಉದ್ಘಾಟಿಸಿದರು
ತಾಲ್ಲೂಕಿನ ಮುಕ್ಕಲ ಗ್ರಾಮದಲ್ಲಿ ನಡೆದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಮಯೂರ ಕಾಂಬಳೆ ಉದ್ಘಾಟಿಸಿದರು   

ಕಲಘಟಗಿ: ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ರಾಷ್ಟೀಕೃತ ಬ್ಯಾಂಕುಗಳ ಮೂಲಕ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ಭದ್ರತೆ ಒದಗಿಸುವ ಯೋಜನೆ ಅನುಷ್ಠಾನಗೊಳಿಸಿದೆ ಎಂದು ನಬಾರ್ಡ್ ಜಿಲ್ಲಾ ಅಭಿವೃಧ್ಧಿ ಅಧಿಕಾರಿ ಮಯೂರ ಕಾಂಬಳೆ ತಿಳಿಸಿದರು.

ತಾಲ್ಲೂಕಿನ ಮುಕ್ಕಲ ಗ್ರಾಮದಲ್ಲಿ ನಬಾರ್ಡ್ ಜಿಲ್ಲಾ ಅಗ್ರಣಿ ಬ್ಯಾಂಕ್ ಹುಬ್ಬಳ್ಳಿ, ತಾಲ್ಲೂಕು ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಬಾರ್ಡ್‌ನಿಂದ ನೇರವಾಗಿ ಅನುದಾನ ನೀಡಲು ಸಾದ್ಯವಿಲ್ಲ, ಬ್ಯಾಂಕು, ಸರ್ಕಾರಿ ಸಂಸ್ಥೆಗಳ ಮೂಲಕ ಸಾಲ ಸೌಲಭ್ಯ ಸಹಾಯ ಧನ ವಿತರಿಸಲಾಗುತ್ತದೆ. ಯಾರಾದರೂ ಸಾಲ ಸೌಲಭ್ಯ ಕೊಡಿಸುವ ಭರವಸೆ ನೀಡಿ ಹಣದ ಬೇಡಿಕೆ ಇಟ್ಟರೆ ನೀಡಿ ಮೋಸ ಹೋಗಬಾರದು ಎಂದು ತಿಳಿಸಿದರು.

ಜಿಲ್ಲಾ ಅಗ್ರಣಿ ಬ್ಯಾಂಕಿನ ಮುಖ್ಯ ಪ್ರಬಂಧಕ ಆಣ್ಣಯ್ಯ ಆರ್ ಮಾತನಾಡಿ, ಆರ್ಥಿಕ ಸಾಕ್ಷರತೆಯ ಅರಿವು ಪ್ರತಿಯೊಬ್ಬ ನಾಗರಿಕನಿಗೆ
ಅಗತ್ಯವಾಗಿದೆ. ಇಂದು ನೀವು ಉಳಿಸಿದ ಹಣ ಅಪತ್ಕಾಲದಲ್ಲಿ ನಿಮ್ಮನ್ನು ಉಳಿಸುತ್ತದೆ ಎಂದರು.

ADVERTISEMENT

ವಂಚಕರ ಜಾಲ ಬ್ಯಾಂಕಿನ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಎಟಿಎಂ ಕಾರ್ಡ್‌ ಸಂಖ್ಯೆ ಹಾಗೂ ಮೊಬೈಲ್ ಒಟಿಪಿ ಕೇಳಿ ಖಾತೆಯ ಹಣ ದೋಚುತ್ತದೆ. ಈ ಬಗ್ಗೆ ಗ್ರಾಹಕರು ಎಚ್ಚರದಿಂದ ಇರಬೇಕು, ಎಟಿಎಂ ಕಾರ್ಡ್ ಸಂಖ್ಯೆ, ಒಟಿಪಿಯನ್ನು ಯಾವುದೇ ಕಾರಣಕ್ಕೂ ನೀಡಬಾರದು ಎಂದರು.

ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ವಿನಾಯಕ ಚಲವಾದಿ, ಮಹಿಳಾ ಸಂಘದ ಪ್ರತಿನಿಧಿ ರತ್ನವ್ವ ಕೌಲಗೇರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಲಿಂಗರಡ್ಡಿ ನಡುವಿನಮನಿ, ಉಪಾಧ್ಯಕ್ಷ ಶ್ರೀಕಾಂತಗೌಡ ಪಾಟೀಲ, ಪಿಡಿಒ ನಾಗರಾಜ ಬಿದರಳ್ಳಿ, ವಿಜಯಲಕ್ಷ್ಮಿ ಚಂಚಿಳ್ಳಿ ಸಹದೇವಪ್ಪ ಹೋರಕೇರಿ, ಯಲ್ಲವ್ವ ಓಲೇಕಾರ, ಶ್ರೀಕಾಂತಗೌಡ ಪಾಟೀಲ, ಕೆವಿಜಿ ಬ್ಯಾಂಕ ವ್ಯವಸ್ಥಾಪಕ ಎಸ್. ಬಾಲರತ್ನಂ, ಬಸವರಾಜ ಇಂದೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.