ಹುಬ್ಬಳ್ಳಿ: ಕಿಮ್ಸ್ ಪ್ರಭಾರ ನಿರ್ದೇಶಕರಾಗಿಡಾ. ರಾಮಲಿಂಗಪ್ಪ ಅಂಟರತಾನಿ ನೇಮಕವಾಗಿದ್ದಾರೆ. ವೈದ್ಯಕೀಯ ಅಧೀಕ್ಷಕರಾಗಿದ್ದ ಅವರು ಮುಂದಿನ ಆದೇಶದ ವರೆಗೂ ಆ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ನಿರ್ಗಮಿತ ನಿರ್ದೇಶಕ ಡಿ.ಡಿ. ಬಂಟ್ ಅವರಿಂದ ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ.
‘ಪ್ರಭಾರ ನಿರ್ದೇಶಕ ಹುದ್ದೆಗೆ ಆಯ್ಕೆ ಮಾಡುವ ಮೂಲಕ ಸರ್ಕಾರ ದೊಡ್ಡ ಜವಾಬ್ದಾರಿ ನೀಡಿದೆ. ಕಿಮ್ಸ್ ಎಲ್ಲ ಸಿಬ್ಬಂದಿ ಒಂದು ತಂಡವಾಗಿ ಕೆಲಸ ಮಾಡುವ ಮೂಲಕ ಜನರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲು ಶ್ರಮಿಸುತ್ತೇವೆ. ಕಿಮ್ಸ್ನ ಪ್ರಗತಿಯ ಬಗ್ಗೆ ನನ್ನದೇ ಆದ ಯೋಜನೆಗಳಿವೆ. ಪ್ರತಿ ದಿನ ಸಾವಿರಾರು ಮಂದಿ ಚಿಕಿತ್ಸೆಗಾಗಿ ಬರುತ್ತಿರುವುದರಿಂದ ಹಾಸಿಗೆಯ ಕೊರತೆ ಇದ್ದು, ಬಾಕಿ ಇರುವ ಕಟ್ಟಡ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಲಾಗುವುದು ಆದ್ಯತೆಯಾಗಲಿದೆ’ ಎಂದು ರಾಮಲಿಂಗಪ್ಪ ತಿಳಿಸಿದ್ದಾರೆ.
‘ಹೊರ ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಬೇಕಿದೆ. ಬಡ್ತಿಗಾಗಿ ಹಲವು ವರ್ಷಗಳಿಂದ ಕಾಯುತ್ತಿರುವ ಸಿಬ್ಬಂದಿಗೆ ಬಡ್ತಿ ನೀಡಬೇಕಾಗಿದೆ’ ಎಂದು ಅವರು ಹೇಳಿದರು. ‘ಸರ್ಕಾರವೇ ನಿರ್ದೇಶಕರನ್ನು ನೇಮಕ ಮಾಡುವುದರಿಂದ ಹುದ್ದೆಗಾಗಿ ಇಲ್ಲಿ ಪೈಪೋಟಿಯ ಪ್ರಶ್ನೆ ಬರುವುದಿಲ್ಲ. 1997ರಿಂದಲೂ ನಾನು ಕಿಮ್ಸ್ನಲ್ಲಿ ಕೆಲಸ ಮಾಡುತ್ತಿದ್ದು, ಎಲ್ಲ ಅರ್ಹತೆ ಇದೆ ಎಂದಷ್ಟೇ ಹೇಳಬಹುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.